ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಮಂಗಳವಾರ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗಿದ್ದು, ಏಪ್ರಿಲ್ 1ರಂದು ರಾತ್ರಿ ‘ಬೆಂಗಳೂರು ಕರಗ’ ನಡೆಯಲಿದೆ.
ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ, ಉತ್ಸವ ಮತ್ತು ಧ್ವಜಾರೋಹಣದ ಮೂಲಕ ಕರಗ ಉತ್ಸವಕ್ಕೆ ಚಾಲನೆ ದೊರೆಯಿತು.
ಮಾರ್ಚ್ 25ರಿಂದ 28ರವರೆಗೆ ಪ್ರತಿ ದಿನ ವಿಶೇಷ ಪೂಜೆಗಳು ನಡೆಯಲಿದ್ದು, ಭಾನುವಾರ ಆರತಿ, ಸೋಮವಾರ ಹಸಿ ಕರಗ, ಮಂಗಳವಾರ ಪೊಂಗಲ್ ಸೇವೆ, ಬುಧವಾರ ಕರಗ ಶಕ್ರೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ ಎಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏ.2ರಂದು ದೇವಾಲಯದಲ್ಲಿ ಗಾವು ಶಾಂತಿ ನಡೆಯುತ್ತದೆ ಮತ್ತು ಶುಕ್ರವಾರ ವಸಂತ್ಯುತ್ಸವ ಮತ್ತು ಧ್ವಜಾರೋಹಣ ನಡೆಯಲಿದೆ. ಕರಗ ಉತ್ಸವದ ಅಂಗವಾಗಿ, ಕಬ್ಬನ್ ಪಾರ್ಕ್ನಲ್ಲಿರುವ ಕರಗದ ಕುಂಟೆ, ಸಂಪಂಗಿ ಕೆರೆಯಲ್ಲಿರುವ ಶಕ್ತಿಪೀಠ, ಕರಗದ ಕುಂಚ, ಕಲಾಸಿಪಾಳ್ಯದಲ್ಲಿರುವ ಮರಿಸ್ವಾಮಿ ಮಠದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ ಎಂದರು.
ಕರಗದ ಪೂಜಾರಿ ಎ. ಜ್ಞಾನೇಂದ್ರ ಅವರು ಕರಗವನ್ನು ಹೊರಲಿದ್ದಾರೆ. ಏ.1ರಂದು ಚೈತ್ರ ಪೂರ್ಣಿಮೆಯ ರಾತ್ರಿ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡುವ ಕರಗ, ಹಲಸೂರು ಆಂಜನೇಯಸ್ವಾಮಿ, ರಾಮದೇವಾಲಯ, ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ, ನಗರ್ತಪೇಟೆ ವೇಣುಗೋಪಾಸ್ವಾಮಿ ದೇವಾಲಯ, ಸಿದ್ದಣ್ಣ ಗಲ್ಲಿ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆ, ಮೂಲಕ ಕೆ.ಆರ್. ಮಾರುಕಟ್ಟೆ, ಮುರಹರಿಸ್ವಾಮಿ ಮಠ, ಅರಳೇಪೇಟೆ, ಮುಸ್ತಾನ್ಸೂಸಾಹೇಬರ ದರ್ಗಾ, ಬಳೇಪೇಟೆ, ಬಳೇಗರಡಿ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಹಟ್ಟಿಗಳಲ್ಲಿ ಸಂಚರಿಸಲಿದೆ. ಒಟ್ಟು 26 ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಲಿದೆ ಎಂದು ಮಾಹಿತಿ ನೀಡಿದರು.
ಮೈಸೂರಿನಲ್ಲಿ ದೀಪಾಲಂಕಾರ ಮಾಡುವವರೇ ಕರಗ ಉತ್ಸವಕ್ಕೂ ದೀಪಾಲಂಕಾರ ಮಾಡಿದ್ದಾರೆ. ಏ.1ರ ಬುಧವಾರ ರಾತ್ರಿ ಬೆಂಗಳೂರು ಕರಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡಲಿದ್ದಾರೆ ಎಂದರು.


