ಆಂಧ್ರಪ್ರದೇಶದಿಂದ ಹುಡುಗರನ್ನು ಕರೆಸಿ ಮೊಬೈಲ್ ಕಳ್ಳತನ ಮಾಡಿ ಅವರನ್ನು ಬಿಡುಗಡೆ ಮಾಡಿಸುವ ವ್ಯವಸ್ಥಿತವಾಗಿ ಕಾರ್ಯಚರಿಸುತ್ತಿದ್ದ 6 ಮಂದಿಯ ಗ್ಯಾಂಗ್ ಅನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ನಾಗನೂರಿ ಕುಮಾರ್, ಸಾಗರ್, ಶಿವಕುಮಾರ್, ಶಿವಶಂಕರ್, ಗುಡ್ಡಸಾಬ್ ಹಾಗೂ ಹಾಲಪ್ಪ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ರಘು ಸೇರಿದಂತೆ ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ರಘು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಿ ಮನೆಯ ಹುಡುಗರನ್ನು ಮೊಬೈಲ್ ಕದಿಯಲು ಬೆಂಗಳೂರಿಗೆ ಕರೆ ತರುತ್ತಿದ್ದ. ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ರೆ ಅವರನ್ನು ರಕ್ಷಿಸುವುದು ಹಾಗೂ ಕದ್ದ ಮೊಬೈಲ್ ಗಳನ್ನು ಸಾಗಿಸುವುದಕ್ಕೂ ವ್ಯವಸ್ಥಿತ ಸಂಚು ಮಾಡಿದ್ದ.
ಮೂರು ಗುಂಪುಗಳಾಗಿ ಕಾರ್ಯಾಚರಣೆ ಮಾಡಿ ಬೆಂಗಳೂರಿನಲ್ಲಿ ಗ್ಯಾಂಗ್ ಮೊಬೈಲ್ ಕಳ್ಳತನ ಮಾಡುತ್ತಿತ್ತು. ಬಿಎಂಟಿಸಿ ಬಸ್ ಪ್ರಯಾಣಿಕರೇ ಗ್ಯಾಂಗ್ ಮುಖ್ಯ ಗುರಿಯಾಗಿದ್ದು, ಮೊದಲು ಎರಡು ಗ್ರೂಪ್ ಬಸ್ಸು ಹತ್ತಿದರೆ ಒಂದು ಗ್ರೂಪ್ ಮೊಬೈಲ್ ಕಳ್ಳತನ ಮಾಡಿ ಮುಂದಿನ ಸ್ಟಾಪ್ ನಲ್ಲಿ ಮತ್ತೊಂದು ಗ್ಯಾಂಗ್ ಗೆ ತಲುಪಿಸುತ್ತಿದ್ದರು. ಒಂದು ವೇಳೆ ಕಳ್ಳತನ ಮಾಡಿ ಸಿಕ್ಕಿಬಿದ್ದರೆ ಮತ್ತೊಂದು ಗ್ಯಾಂಗ್ ಅವರನ್ನು ಹೊಡೆದು ಪೊಲೀಸ್ ಠಾಣೆಗೆ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗುವ ನಾಟಕ ಮಾಡುತ್ತಿದ್ದರು.
ಗ್ಯಾಂಗ್ ಪ್ರತಿ ದಿನ ಬೇರೆ ಬೇರೆ ಏರಿಯಾಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿತ್ತು. ಎಲ್ಲವನ್ನೂ ಕಿಂಗ್ ಪಿನ್ ರಘು ಮಾನಿಟರ್ ಮಾಡುತ್ತಿದ್ದ. ಆತ ಪರಾರಿಯಾಗಿದ್ದು, ಆತನ ಗ್ಯಾಂಗ್ ನ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ನೂರಕ್ಕೂ ಅಧಿಕ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.


