ಪೊಲೀಸ್ ಆಗಬೇಕು ಎಂದು ಕಂಡಿದ್ದ ಕನಸು ಎರಡು ಬಾರಿ ಪಿಎಸ್ ಐ ಪರೀಕ್ಷೆ ಯಲ್ಲಿ ಫೇಲ್ ಆಗಿದ್ದರಿಂದ ನನಸು ಆಗಲೇ ಇಲ್ಲ. ಆದರೂ ಪೊಲೀಸ್ ಎಂದು ಹೇಳಿಕೊಂಡು ದರೋಡೆ ಮಾಡಿ ಸಹಚರರೊಂದಿಗೆ ಸಿಕ್ಕಿಬಿದ್ದಿದ್ದಾನೆ.
ಹೌದು ಬೆಂಗಳೂರಿನಲ್ಲಿ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಮನೆಗೆ ನುಗ್ಗಿ ತಪಾಸಣೆ ಮಾಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ನಕಲಿ ಪಿಎಸ್ ಐ ಸೇರಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿದೆ.
ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸವಾಗಿದ್ದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಕಲಿ ಸಬ್ ಇನ್ಸ್ಪೆಕ್ಟರ್ ಎಚ್.ಮಲ್ಲಿಕಾರ್ಜುನ್ ನಾಯಕ್ ಅಲಿಯಾಸ್ ಪಿಎಸ್ಐ ಮಲ್ಲಣ್ಣ, ಸಹಚರರಾದ ವಿ.ಪ್ರಮೋದ್, ಎಚ್.ಟಿ.ವಿನಯ್ ಹಾಗೂ ಬಾಗಲಗುಂಟೆಯ ಪಿ.ಹೃತ್ವಿಕ್ ಅಲಿಯಾಸ್ ಮೋಟಾ ಅವರನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ಆಗಬೇಕು ಅಂತ ಮಲ್ಲಿಕಾರ್ಜುನ ಎರಡು ಬಾರಿ ಎಕ್ಸಾಮ್ ಬರೆದಿದ್ದ. ಎರಡು ಬಾರಿಯೂ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಇಷ್ಟಾದ್ರೂ ಪರೀಕ್ಷೆ ಪಾಸ್ ಆಗಿ ಪಿಎಸ್ಐ ಆಗಿದ್ದೇನೆ ಎಂದು ಊರಲ್ಲಿ ಬಿಂಬಿಸಿದ್ದ. ಪೊಲೀಸ್ ಯೂನಿಫಾರಂ, ಲಾಠಿ, ಟೋಪಿ, ಶೂ ಧರಿಸಿ ಫೋಟೋ ಶೂಟ್ ಮಾಡಿಸಿದ್ದ. ಸ್ವಂತ ಊರು ಸಿರಗುಪ್ಪದಲ್ಲಿ ತಾನೂ ಬೆಂಗಳೂರಲ್ಲಿ ಪಿಎಸ್ಐ ಆಗಿದ್ದೀನಿ ಅಂತ ಬಿಲ್ಡಪ್ ಕೊಟ್ಟಿದ್ದ.
ಐಷಾರಾಮಿ ಜೀವನ ನಡೆಸಬೇಕು ಅಂತ ಮಲ್ಲಿಕಾರ್ಜುನ ಅಡ್ಡದಾರಿ ಹಿಡಿದಿದ್ದ. ಇದಕ್ಕೆ ಮಲ್ಲಿಕಾರ್ಜುನನಿಗೆ ಎ4 ಆರೋಪಿ ಹೃತ್ವಿಕ್ ಸಾಥ್ ಕೊಟ್ಟಿದ್ದ. ನವೀನ್ ಎಂಬವರನ್ನು ಹೃತ್ವಿಕ್ ತುಂಬಾ ಹತ್ತಿರದಿಂದ ಗಮನಿಸಿದ್ದ. ನವೀನ್ ಮನೆಗೆ ನುಗ್ಗಿದ್ರೆ ಹಣ, ಚಿನ್ನಾಭರಣ ಸಿಗುತ್ತೆ ಎಂದು ಮಲ್ಲಿಕಾರ್ಜುನನಿಗೆ ತಿಳಿಸಿದ್ದ. ಅದರಂತೆ ಪೊಲೀಸ್ ಡ್ರೆಸ್ ಧರಿಸಿ ನವೀನ್ ಮನೆಗೆ ಇದೇ ತಿಂಗಳು 7 ರಂದು ಕಾರಿನಲ್ಲಿ ಆರೋಪಿಗಳು ಎಂಟ್ರಿ ಕೊಟ್ಟಿದ್ದರು.
ನೀನು ಗಾಂಜಾ ಮಾರುತ್ತಿದ್ದೀಯಾ, ಮನೆ ಸರ್ಚ್ ಮಾಡಬೇಕು ಅಂತಾ ಬೆದರಿಕೆ ಹಾಕಿದ್ದರು. ನವೀನ್ ಮೇಲೆ ಲಾಠಿ, ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದರು. ಅರೆಸ್ಟ್ ಮಾಡಬಾರದು ಅಂದರೆ ಹಣ ಕೊಡಬೇಕು ಎಂದು ಖಾತೆಯಲ್ಲಿದ್ದ 87 ಸಾವಿರ, ಬೀರುವನಲ್ಲಿದ್ದ 53 ಸಾವಿರ, ಪರ್ಸ್ನಲ್ಲಿದ್ದ 2 ಸಾವಿರ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನವೀನ್ ಪ್ರಕರಣ ದಾಖಲಿಸಿದ್ದರು.
ನವೀನ್ ಹಾಗೂ ಆರೋಪಿ ಹೃತ್ವಿಕ್ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು.ವೈಯಕ್ತಿಕ ಕಾರಣಗಳಿಗೆ ಸ್ನೇಹಿತರ ಮಧ್ಯೆ ಬಿರುಕು ಮೂಡಿತ್ತು. ಈ ಹಿನ್ನಲೆಯಲ್ಲಿ ಪಿಎಸ್ಐ ಮಲ್ಲಣ್ಣನಿಗೆ ಹೇಳಿ ಆತ ದರೋಡೆ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿ ನಕಲಿ ಪಿಎಸ್ಐ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 45 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು ಸೀಜ್ ಮಾಡಿದ್ದಾರೆ. ವಿದ್ಯಾರಣ್ಯಪುರ ಪೊಲೀಸರಿಂದ ತನಿಖೆ ಮುಂದುವರಿದಿದೆ.


