ಭೀಮನ ಅಮಾವಸ್ಯೆ ದಿನ ಗಂಡನ ಪೂಜೆ ಮಾಡಿದ ಗೃಹಿಣಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲದ ಮಾದನಾಯಕಹಳ್ಳಿಯ ಅಂಚೆಪಾಳ್ಯದಲ್ಲಿ ಸ್ಪಂದನಾ (24) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ.
ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸ್ಪಂದನಾ ಪ್ರೀತಿಸಿ ಅಭಿಷೇಕ್ ನನ್ನು ರಿಜಿಸ್ಟ್ರರ್ ಮದುವೆ ಆಗಿದ್ದು, ಭೀಮನ ಅಮಾವಸ್ಯೆ ದಿನ ಗಂಡನ ಪಾದ ಪೂಜೆ ಮಾಡಿ ದೀರ್ಘಾಯುಷ್ಯಕ್ಕೆ ಬೇಡಿಕೊಂಡಿದ್ಧಳು.
ಬೆಳಿಗ್ಗೆ ಗಂಡನ ಪೂಜೆ ಮಾಡಿ ಮಧ್ಯಾಹ್ನ 12.30ರ ಸುಮಾರಿಗೆ ತವರು ಮನೆಯರಿಗೆ ಕರೆ ಮಾಡಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ನಂತರ ಸೋದರಿಗೆ ವಾಟ್ಸಪ್ ಮಾಡಿ ನಾನು ಸತ್ತರೆ ಗಂಡನ ಮನೆಯವರು ಹಾಗೂ ಕೆಲಸ ಮಾಡುವ ಸಂಸ್ಥೆಯಲ್ಲಿ ಇದ್ದ ಎಲ್ಲರೂ ಕಾರಣ ಎಂದು ಆರೋಪಿಸಿದ್ದಳು.
ಆದರೆ ಸಂಜೆ 7.30ರ ವೇಳೆಗೆ ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿದ್ದು, 8.30ರ ಸುಮಾರಿಗೆ ಅಭಿಷೇಕ್ ಭೀಗರಿಗೆ ಕರೆ ಮಾಡಿ ನಿಮ್ಮ ಮಗಳು ಸತ್ತು ಹೋಗಿದ್ದಾಳೆ ಎಂದು ತಿಳಿಸಿದ್ದಾನೆ.
ಸ್ಪಂದನಾ ಪೋಷಕರ ವಿರೋಧದ ನಡುವೆಯೇ ಇಬ್ಬರು ಮದುವೆಯಾಗಿದ್ದು, ಪತಿ ಅಭಿಷೇಕ್ ಹಾಗೂ ಅತ್ತೆ ಲಕ್ಷ್ಮಮ್ಮ ಸೇರಿದಂತೆ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಬಳಿಕ 5 ಲಕ್ಷ ರೂ. ಹಣವನ್ನ ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರು.
ಅತ್ತೆ ಮಾತನ್ನ ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಎಂದು ಗುರುವಾರ ತಂದೆಗೆ ಕರೆ ಮಾಡಿ ಸ್ಪಂದನಾ ಕಣ್ಣೀರಿಟ್ಟಿದ್ದಳು. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ನಿಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಪತಿ ಕುಟುಂಬಸ್ಥರು ತಿಳಿಸಿದ್ದರು. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳು ಸಾವನ್ನಪ್ಪಿರೋದು ಪತ್ತೆಯಾಗಿದೆ. ಪತಿ ಹಾಗೂ ಅತ್ತೆ ಲಕ್ಷ್ಮಮ್ಮ ಮಗಳಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ಸ್ಪಂದನಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಪಂದನಾ ಕುಟುಂಬಸ್ಥರು ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.


