Saturday, September 7, 2024
Google search engine
Homeತಾಜಾ ಸುದ್ದಿಬಿಜೆಪಿ ಆಡಳಿತದ 21 ಹಗರಣಗಳ ತನಿಖೆ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ

ಬಿಜೆಪಿ ಆಡಳಿತದ 21 ಹಗರಣಗಳ ತನಿಖೆ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ

ಬಿಜೆಪಿ ಆಡಳಿತದಲ್ಲಿ 21 ಹಗರಣಗಳು ನಡೆದಿದ್ದು, ಇವುಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ವಾಲ್ಮೀಕಿ ಹಗರಣದ ಕುರಿತು ಬಿಜೆಪಿ ಸದಸ್ಯರ ಆರೋಪಕ್ಕೆ ಉತ್ತರ ನೀಡುವಾಗ ಬಿಜೆಪಿ ಆಡಳಿತದಲ್ಲಿ 21 ಹಗರಣಗಳಲ್ಲಿ 500 ಕೋಟಿ ರೂ.ಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಕೂಗುತ್ತಿದರೂ ಲಿಖಿತ ಉತ್ತರ ಓದಿದ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಹಗರಣದಲ್ಲಿ ಈಗಾಗಲೇ ತಪ್ಪಿತಸ್ಥರನ್ನು ಬಂಧಿಸಿ ಹಣ ವಸೂಲು ಮಾಡಲಾಗುತ್ತಿದೆ. ಆದರೆ ಬಿಜೆಪಿ ಆಡಳಿತದಲ್ಲಿ ನಡೆದ ಹಗರಣಗಳಲ್ಲಿ ಯಾವುದೇ ತನಿಖೆ ನಡೆದಿಲ್ಲ. ಅಲ್ಲದೇ ಹಣ ವಾಪಸ್ ತರುವ ಕೆಲಸವೂ ಮಾಡಿಲ್ಲ ಎಂದು ವಿವರಿಸಿದರು.

ಬಿಜೆಪಿ ಮುಖಂಡರ ವಿರುದ್ಧ 170ಕ್ಕೂ ಅಧಿಕ ಕೇಸ್ ಗಳಿವೆ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಆದಾಯ ನೂರಾರು ಕೋಟಿ ರೂ. ಆಗಿರುವುದು ಹೇಗೆ? ಯಡಿಯೂರಪ್ಪ, ಬೊಮ್ಮಾಯಿ ಅವರ ಆಡಳಿತದಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ ಎಂದು ಅವರು ಹೇಳಿದರು

ಬೊಮ್ಮಾಯಿ ಸಚಿವರಾಗಿದ್ದಾಗ ಕಿಯೊನಿಕ್ಸ್, ಎಪಿಎಂಸಿಗಳಲ್ಲಿ ಭ್ರಷ್ಟಾಚಾರ ನಡೆದಿತ್ತು. ಅಂದು ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದ ಅಧಿಕಾರಿಗಳನ್ನು ಆರೋಪ ಮುಕ್ತ ಮಾಡಿದ್ದರಿಂದಲೇ ಮತ್ತೆ ಅಕ್ರಮಗಳು ನಡೆದಿವೆ. ಇದರಲ್ಲಿ ಸರ್ಕಾರದ ಸಚಿವರು ಭಾಗಿಯಾಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬೆಂಗಳೂರಿನ ರಾಘವೇಂದ್ರ ಬ್ಯಾಂಕ್ ಅಕ್ರಮದಲ್ಲಿ ಬೊಮ್ಮಾಯಿ, ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಅಶೋಕ್ ಅವರು ಕೂಡ ಭಾಗಿಯಾಗಿದ್ದಾರೆ. ಈ ಎಲ್ಲಾ ಹಗರಣಗಳು ನಡೆದಿರುವ ಬಗ್ಗೆ ಸಿಎಜಿ ವರದಿಯಲ್ಲೇ ಉಲ್ಲೇಖಿಸಲಾಗಿದೆ. ಈ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments