ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹೇಳಿದ್ದಾರೆ. ಅದನ್ನು ನಾವು ಪಾಲಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಕುರಿತು ನನ್ನ ಪರ ವಿರುದ್ಧ ಹೇಳಿಕೆಗಳನ್ನು ಶಾಸಕರು, ಸಚಿವರು ಯಾರೇ ನೀಡುತ್ತಿರಬಹುದು. ಈ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆಗಳೇ ಹೊರತು ಪಕ್ಷಕ್ಕೆ ಒಳ್ಳೆಯದು ಮಾಡುವಂತದ್ದಲ್ಲ ಎಂದರು.
ದೆಹಲಿಗೆ ಪ್ರಯಾಣ ಬೆಳೆಸುತ್ತಿರುವ ನೀವು ಮರಳುವಾಗ ಸಿಹಿಸುದ್ದಿ ಕೊಡುತ್ತಿರಾ ಎಂಬ ಪ್ರಶ್ನೆಗೆ “ಪ್ರತಿದಿನವೂ ನನಗೆ ಶುಭ ದಿನ, ಶುಭ ಜೀವನ, ಶುಭ ಪ್ರಾರಂಭ, ಯಶಸ್ಸಿನ ದಿನ, ಪ್ರತಿ ದಿನವೂ ಕಷ್ಟದ ದಿನವೇ. ಪ್ರತಿ ದಿನವೂ ಏನೂ ಸುಲಭವಾಗಿ ಇರುವುದಿಲ್ಲ. ಜನರ ಕಷ್ಟಗಳನ್ನು ಬಗೆಹರಸಿಬೇಕಾದರೆ ಕಷ್ಟ ಕಾರ್ಪಣ್ಯಗಳು, ಅಡಚಣೆಗಳು, ತೊಡಕುಗಳು ಇದ್ದೇ ಇರುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ. ಟೀಕೆಗಳನ್ನು ಎದುರಿಸಲೇ ಬೇಕು. ನಮ್ಮ ಕೆಲಸವನ್ನು ಮುಂದುವರೆಸಲೇ ಬೇಕು” ಎಂದು ತಿಳಿಸಿದರು.
ನಾನು, ಸಿದ್ದರಾಮಯ್ಯ ಅವರು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ: ನನಗೆ ಯಾವ ಗೊಂದಲವೂ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಹಾಗೂ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆ ಎಂಬುದು ನಮಗೆ ಗೊತ್ತು. ನಾವಿಬ್ಬರು ಕದ್ದು ಮುಚ್ಚಿ ಮಾತನಾಡಿಕೊಂಡಿಲ್ಲ. ನಮ್ಮ ಪಕ್ಷದ ವರಿಷ್ಠರು ಎಲ್ಲ ಸೇರಿ ಮಾತನಾಡಿಕೊಂಡಿದ್ದೇವೆ. ಬೇರೆಯವರೆಲ್ಲ ಇದಕ್ಕೆ ಟೆನ್ಷನ್ ತೆಗೆದುಕೊಳ್ಳುವುದು, ಹೇಳಿಕೆ ಕೊಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದರು.
ನಾವು ಮಾತನಾಡಿದರೆ ನೋಟಿಸ್ ನೀಡುತ್ತಾರೆ ಯತೀಂದ್ರ ಮಾತನಾಡಿದರೆ ಏಕೆ ನೋಟಿಸ್ ನೀಡುವುದಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಪ್ರಶ್ನಿಸಿರುವ ಬಗ್ಗೆ ಕೇಳಿದಾಗ, ಈ ಬಗ್ಗೆ ಹೈಕಮಾಂಡ್ ಕೇಳೋಣ ಎಂದು ಪ್ರತಿಕ್ರಿಯೆ ನೀಡಿದರು.
ದೆಹಲಿಗೆ ಹೋದ ಮೇಲೆ ಎಲ್ಲ ನಾಯಕರು ಮತ್ತು ಯಾರು ಸಿಗುತ್ತಾರೋ ಅವರನ್ನು ಭೇಟಿ ಮಾಡಲಾಗುವುದು. ಸಂಸತ್ ಅಧಿವೇಶನ ನಡೆಯುತ್ತಿರುತ್ತದೆ. ಬಿಡುವಿದ್ದರೆ ಖಂಡಿತವಾಗಿ ಭೇಟಿ ಮಾಡುತ್ತೇನೆ. ಇಂದು ಸಂಜೆ 4 ಗಂಟೆಗೆ ಎಐಸಿಸಿಯಲ್ಲಿ ಸಭೆಯಿದೆ. ವಿವಿಧ ಚುನಾವಣೆಗಳು ಹಾಗೂ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುವುದು. ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆಯಿದೆ. ಆದ ಕಾರಣಕ್ಕೆ ನನ್ನನ್ನು ಚರ್ಚೆ ನಡೆಸಲು ಕರೆದಿದ್ದಾರೆ. ನಾನು ಹೋಗುತ್ತಿದ್ದೇನೆ ಎಂದು ಮಾಹಿತಿ ನೀಡಿದರು.
ಕೇರಳಕ್ಕೆ ಹೋಗಿದ್ದೆ ನಂತರ ಅಸ್ಸಾಂಗೂ ತೆರಳಬೇಕು. ಇಂದು ಬಜೆಟ್ ಸಭೆ ಇರುವ ಕಾರಣಕ್ಕೆ ಮುಖ್ಯಮಂತ್ರಿಗಳ ಬಳಿ ಬರಲು ಆಗುವುದಿಲ್ಲ ಎಂದು ಮನವಿ ಮಾಡಿದ್ದೆ. ಸೋಮವಾರದಂದು ಅಧಿಕಾರಿಗಳ ಜೊತೆ ಬಜೆಟ್ ಸಭೆ ನಡೆಸಿದ್ದೇನೆ. ಅವರು ಎಲ್ಲವನ್ನು ವಿವರಿಸುತ್ತಾರೆ. ನಂತರ ಬಂದು ಅವರ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದರು.


