ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನ ಸರ್ವನಾಶವಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಂಗಳವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಎಲ್ ಪಿಜಿ ಕೊರತೆ ಹಾಗೂ ಬೆಲೆ ಏರಿಕೆಯಿಂದ ರಾಜ್ಯದ 5 ಲಕ್ಷ ಆಟೋ ಚಾಲಕರ ಬದುಕು ನಾಶವಾಗಿದೆ ಎಂದು ಆರೋಪಿಸಿದ್ದಾರೆ.
ಆಟೋ ಚಾಲಕರು, ಸಣ್ಣ ಹೋಟೆಲ್ ಮಾಲೀಕರು, ವ್ಯಾಪಾರಿಗಳು, ಗಿಗ್ ಕಾರ್ಮಿಕರು ಹಾಗೂ ಎಲ್ಪಿಜಿ ಸಮಸ್ಯೆಯಿಂದ ಜನರ ಜೀವನೋಪಾಯದ ಮೇಲೆ ಆಗಿರುವ ಪರಿಣಾಮ ಹಾಗೂ ಉದ್ಯೋಗ ನಿರಾಕರಣೆ, ಸಂಕಷ್ಟಲ್ಲಿರುವ ಲಕ್ಷಾಂತರ ಕನ್ನಡಿಗರ ಸಮಸ್ಯೆಗಳನ್ನ ಉಲ್ಲೇಖಿಸಿ ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಎಲ್ಪಿಜಿ ಮತ್ತು ಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆಯು ಕರ್ನಾಟಕದಾದ್ಯಂತ ಜನರ ಜೀವನೋಪಾಯವನ್ನ ನಾಶಪಡಿಸಿದೆ. ಇದು ಕೇವಲ ನೀತಿಯ ವೈಫಲ್ಯವಲ್ಲ. ಬದಲಿಗೆ ಕೇಂದ್ರ ಬಿಜೆಪಿ ಸರ್ಕಾರದ ಉದಾಸೀನತೆ, ಅಹಂಕಾರ ಮತ್ತು ಸಂಪೂರ್ಣ ಆಡಳಿತಾತ್ಮಕ ಅಸಮರ್ಥತೆಗೆ ಸಾಕ್ಷಿಯಾಗಿದೆ. ಕರ್ನಾಟಕದ ಬಿಜೆಪಿ/ಜೆಡಿಎಸ್ ಕೇಂದ್ರ ಸಚಿವರು ಅಧಿಕಾರವನ್ನ ಆನಂದದಿಂದ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಈ ಪರಿಸ್ಥಿತಿಗೆ ಅವರು ಉತ್ತರದಾಯಿಯಾಗಿರಬೇಕು ಅಥವಾ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು.
ಬಿಜೆಪಿಗೆ 6 ಪ್ರಶ್ನೆ
- ಕೆಲವೇ ವಾರಗಳಲ್ಲಿ 106% ಬೆಲೆ ಏರಿಕೆಯ ಆಘಾತ!
- ಕೃತಕ ಅಭಾವ, ನೈಜ ಸಂಕಷ್ಟ!
- 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ!
- ವಾಣಿಜ್ಯ ಎಲ್ಪಿಜಿ ಬೆಲೆ ಗಗನಕ್ಕೆ – ಹೋಟೆಲ್, ಸಣ್ಣ ವ್ಯಾಪಾರಿಗಳು ಕಂಗಾಲು. ಇದು ‘ಮೋದಿ-ನಿರ್ಮಿತ’ ವಿಪತ್ತು!
- ಕಪ್ಪು ಮಾರುಕಟ್ಟೆ ಹಾವಳಿ, ನಾಪತ್ತೆಯಾದ ಕೇಂದ್ರ ಸರ್ಕಾರ!
- ಜೀವನೋಪಾಯದ ಬಿಕ್ಕಟ್ಟು, ನಾಯಕತ್ವದ ವೈಫಲ್ಯ. ಬಾಗಲಕೋಟೆ, ದಾವಣಗೆರೆ ಉಪಚುನಾವಣೆಗಳಲ್ಲಿ ಮತ ಕೇಳುವ ಮುನ್ನ ಈ ಪ್ರಶ್ನೆಗೆ ಉತ್ತರಿಸಲಿ ಎಂದು ಪ್ರಶ್ನೆ ಮಾಡಿದ್ದಾರೆ.


