ವಿಮಾನ ಹಾರಾಟದ ವೇಳೆ ಏಕಾಏಕಿ ಮೂರ್ಚೆ ಬಂದು ಪ್ರಜ್ಞೆ ತಪ್ಪಿದ ವಿದೇಶೀ ಮಹಿಳೆಗೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸುವ ಮೂಲಕ ವೈದ್ಯರಾಗಿ ಕರ್ತವ್ಯ ನಿಭಾಯಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಖಾನಾಪುರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಗೋವಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕ ಮೂಲದ ಯುವತಿಗೆ ಇದ್ದಕ್ಕಿದ್ದಂತೆ ಕೈ-ಕಾಲುಗಳಲ್ಲಿ ನಡುಕ ಉಂಟಾಗಿ ಕೆಲವೇ ಕ್ಷಣದಲ್ಲಿ ಆಕೆ ಮೂರ್ಛೆ ಹೋಗಿದ್ದರು. ನಾಡಿಮಿಡಿತ ಕೂಡ ನಿಂತು ಹೋಗಿರುವುದು ಕಂಡುಬಂದಿತ್ತು.
ಸನ್ನಿವೇಶ ಗಮನಿಸಿದ ವೃತ್ತಿಯಲ್ಲಿ ವೈದ್ಯೆಯೂ ಆಗಿರುವ ಅಂಜಲಿ ನಿಂಬಾಳ್ಕರ್ ಕೂಡಲೇ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದರು. ಶ್ವಾಸಕೋಶದ ಮೇಲೆ ಎರಡೂ ಕೈಗಳನ್ನಿಟ್ಟು ಪಂಪ್ ಮಾಡಿ ಉಸಿರಾಡುವಂತೆ ಮಾಡಿದರು.
ಸತತ ಪ್ರಯತ್ನದಿಂದ ಉಸಿರಾಡಲು ಆರಂಭಿಸಿದ ಮಹಿಳೆ ಅರ್ಧಗಂಟೆಯ ನಂತರ ಯುವತಿ ಮತ್ತೆ ಕುಸಿದುಬಿದ್ದಳು. ಆದರೆ ಅಂಜಲಿ ನಿಂಬಾಳ್ಕರ್ ಪ್ರಯತ್ನದಿಂದಾಗಿ ಮತ್ತೆ ಜೀವ ಉಳಿಯಿತು.
ವಿಮಾನ ದೆಹಲಿ ತಲುಪುವವರೆಗೂ ಆಕೆಯ ಪಕ್ಕದಲ್ಲೇ ಇದ್ದು ಆರೋಗ್ಯ ಸ್ಥಿತಿ ನೋಡಿಕೊಂಡರು. ವಿಮಾನ ದೆಹಲಿ ನಿಲ್ದಾಣ ತಲುಪುತ್ತಿದ್ದಂತೆ ಅಂಬುಲೆನ್ಸ್ ಸಿದ್ಧವಿದೆಯೇ ಎಂಬುದನ್ನ ಖಚಿತಪಡಿಸಿಡಿದ್ದೂ ಅಲ್ಲದೇ ತಕ್ಷಣ ಆಕೆಯನ್ನ ಆಸ್ಪತ್ರೆ ಸಾಗಿಸಲು ನೆರವಾದರು. ಅಂಜಲಿ ನಿಂಬಾಳ್ಕರ್ ಅವರ ಪ್ರಯತ್ನಕ್ಕೆ ಪೈಲಟ್ ಸೇರಿದಂತೆ ವಿಮಾನ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.
ಅಂಜಲಿ ನಿಂಬಾಳ್ಕರ್ ಯಾರು?
ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ನ ಹಿರಿಯ ನಾಯಕಿ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರರು. ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರವನ್ನ ಪ್ರತಿನಿಧಿಸುತ್ತಿರುವ ಇವರು, 2018ರಲ್ಲಿ ಇಲ್ಲಿ ಗೆದ್ದು ಶಾಸಕಿಯಾಗಿದ್ದರು.
1976ರ ಆಗಸ್ಟ್ 22ರಂದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಹಿಂದೂ ಮರಾಠ ಕುಟುಂಬದಲ್ಲಿ ಅಂಜಲಿ ನಿಂಬಾಳ್ಕರ್ ಜನಿಸಿದರು.
ಮಾಸ್ಟರ್ ಆಫ್ ಸರ್ಜರಿ, ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ ಇವರ ವಿದ್ಯಾರ್ಹತೆ. ಇವರು ಸ್ತ್ರೀರೋಗ ಶಾಸ್ತ್ರ ಮತ್ತು ಲ್ಯಾಪ್ರೊಸ್ಕೋಪಿಯಲ್ಲಿ ಎಂಬಿಬಿಎಸ್ ಪದವಿಯ ಜೊತೆಗೆ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ವಿಧಾಸಭೆಗೆ ಈ ವರೆಗೆ ಆಯ್ಕೆಯಾದ ಹತ್ತು ವೈದ್ಯರಲ್ಲಿ ಇವರೂ ಒಬ್ಬರಾಗಿದ್ದಾರೆ.


