ಪ್ರೇಮಿಸಿದ ಯುವತಿ ಪ್ರೀತಿ ನಿರಾಕರಿಸಿದ್ದರಿಂದ ನೊಂದ ಪ್ರತಿಭಾವಂತ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಅಮದಳ್ಳಿಯ ಟೋಲ್ನಾಕಾದಲ್ಲಿ ಜಿತೆಂದ್ರ ಜಗದೀಶ ಪಡ್ತಿ (20) ಆತ್ಮಹತ್ಯೆ ಮಾಡಿಕೊಂಡ ಯುವಕ.
ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ಜಿತೇಂದ್ರ ಇತ್ತೀಚೆಗೆ ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದ.
ಕಾಲೇಜಿನಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಪ್ರೇಮ ನಿವೇದನೆ ಮಾಡಿದ್ದ. ಆದರೆ, ಸ್ನೇಹಿತೆಯಾಗಿದ್ದ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ಇನ್ನು ಆಕೆ ಹೆಚ್ಚಿನ ಓದಿಗಾಗಿ ಗೋವಾದಲ್ಲಿ ಇದ್ದಳು.
ಗುರುವಾರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಶೇ.35ಕ್ಕೂ ಹೆಚ್ಚು ದೇಹ ಸುಟ್ಟಿದ್ದರಿಂದ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



