ಬೆಂಗಳೂರು: ಕುಖ್ಯಾತಿ ಹೊಂದಲು ಮನೆಯ ಮುಂಭಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರು ಸೇರಿ 25ಕ್ಕೂ ವಾಹನಗಳ ಗಾಜುಗಳನ್ನು ಪುಂಡಾಟ ಮೆರೆದಿದ್ದ ಐವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೊಂಡೆಕೊಪ್ಪದ ಲಿಖಿತ್ , ಜಯಂತ್ ಸೇರಿ ಗ್ಯಾಂಗ್ ನಲ್ಲಿದ್ದ ಐವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ.
ಕಾರಿನ ಮೇಲೆ ಲಾಂಗ್ ಬೀಸಿ ಕೃತ್ಯ
ತಮ್ಮ ಏರಿಯಾದಲ್ಲಿ ಆರೋಪಿಗಳಿಗೆ ಸಾರ್ವಜನಿಕರೊಬ್ಬರು ತಡೆದು ಬುದ್ಧಿ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡಿದ್ದ ಆರೋಪಿಗಳು ತಡರಾತ್ರಿ ನಿಲ್ಲಿಸಿದ್ದ ಕಾರಿನ ಮೇಲೆ ಲಾಂಗ್ನಿಂದ ಗ್ಲಾಸ್ ಒಡೆದಿದ್ದರು. ಕುಖ್ಯಾತಿ ಹೊಂದಲು ಕೃತ್ಯ ಎಸಗಿರುವುದಾಗಿ ಕೇಳಿಬಂದಿದೆ.
ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಕಾರ್ ಗ್ಲಾಸ್ ಒಡೆದಿದ್ದ ಈ ಗ್ಯಾಂಗ್ ಬಳಿಕ ಮಾದನಾಯಕನಹಳ್ಳಿಯ ಮಾಗಡಿ ರಸ್ತೆಯ ಬಳಿ ಚಾಲಕನ ಮೇಲೆ ಲಾಂಗ್ ಬೀಸಿತ್ತು. ಲಾರಿ ಗ್ಲಾಸ್ ಒಡೆದು, ಚಾಲಕ ಮಲಗಿರುವುದನ್ನು ಗಮನಿಸಿ ಹಣಕ್ಕಾಗಿ ಬೆದರಿಕೆ ಹಾಕಿತ್ತು. ಹಣ ತೆಗೆದುಕೊಡುವಷ್ಟರಲ್ಲಿ ಲಾಂಗ್ ಬೀಸಿ ಕೈ ಕೂಡ ಕಟ್ ಮಾಡಿತ್ತು. ಬಳಿಕ ಮೊಬೈಲ್ ಹಾಗೂ 5 ಸಾವಿರ ರೂ. ಹಣ ದೋಚಿ ಗ್ಯಾಂಗ್ ಪರಾರಿಯಾಗಿತ್ತು.
ಇಷ್ಟಕ್ಕೇ ಸುಮ್ಮನಾಗದ ಈ ಗ್ಯಾಂಗ್ ದೊಡ್ಡಬಳ್ಳಾಪುರದ ಬಳಿ ಕೂಡ ಲಾಂಗ್ ಬೀಸಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬೆದರಿಕೆ ಹಾಕಿತ್ತಯ. ಸಿಕ್ಕ ಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡಿತ್ತು.
ಈ ಸಂಬಂಧ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ 16, ಎಪಿ ನಗರದಲ್ಲಿ 6, ಮಾದನಾಯಕನ ಹಳ್ಳಿಯಲ್ಲಿ 3, ದೊಡ್ಡ ಬಳ್ಳಾಪುರದಲ್ಲಿ 3 ಕೇಸ್ಗಳು ಸೇರಿ ಒಟ್ಟು 28 ಪ್ರಕರಣಗಳು ಆರೋಪಿಗಳ ವಿರುದ್ಧ ದಾಖಲಾಗಿದ್ದವು. ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಸೊಂಡೆಕೊಪ್ಪದಲ್ಲಿ ಐವರನ್ನು ಬಂಧಿಸಿದ್ದಾರೆ.



