ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿಗೆ 1.04 ಕೋಟಿ ರೂ. ಹುಂಡಿಯಲ್ಲಿ ಸಂಗ್ರಹವಾಗಿದೆ. ಇದರಲ್ಲಿ ಚಿನ್ನಾಭರಣ, ಬೆಳ್ಳಿಯ ಸಾಮಾನು ಕೂಡ ಸೇರಿವೆ.
ಯಲ್ಲಮ್ಮನ ಗುಡ್ಡದಲ್ಲಿ ಕಳೆದೆರಡು ದಿನಗಳ ನಡೆದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಗುರುವಾರ ಮುಕ್ತಾಯಗೊಂಡಿತು.
ಎಣಿಕೆ ವೇಳೆ 1.04 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ 5.22 ಲಕ್ಷ ರೂ. ಮೌಲ್ಯದ 53 ಗ್ರಾಂ ಚಿನ್ನಾಭರಣ, 1.27 ಲಕ್ಷ ರೂ. ಮೌಲ್ಯದ 1,276 ಗ್ರಾಂ ಬೆಳ್ಳಿಯ ಆಭರಣ, 98.23 ಲಕ್ಷ ರೂ. ನಗದು ಸೇರಿದೆ ಎಂದು ದೇಗುಲ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಮಾಹಿತಿ ನೀಡಿದ್ದಾರೆ.
ಸಪ್ತಗುಡ್ಡ, ಸಪ್ತ ಕೊಳ್ಳಗಳ ನಡುವೆ ನೆಲೆನಿಂತಿರುವ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಿದ ಬಳಿಕ ಹುಂಡಿಯಲ್ಲಿ ನಗದು ಮಾತ್ರವಲ್ಲದೆ, ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಕಾಣಿಕೆ ರೂಪದಲ್ಲಿ ಭಕ್ತಿ ಸಮರ್ಪಿಸುತ್ತಾರೆ.
ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ, ದೇವಸ್ಥಾನ ಅಧಿಕಾರಿಗಳು, ಬೆಳಗಾವಿ ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆ ಕಚೇರಿ, ಸವದತ್ತಿಯ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಸವದತ್ತಿ ಪೊಲೀಸರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಬೆಳಗಾವಿ ಅಧಿಕಾರಿ ಬಾಳೇಶ ಅಬ್ಬಾಯಿ, ಎಂ.ಪಿ.ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್.ಸವದತ್ತಿ, ಎನ್.ಎಂ.ಮುದಿಗೌಡರ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾನಾಕ್ಷಿ, ಮಹಾಂತೇಶ ಕೋಡಳ್ಳಿ, ಪ್ರಭು ಹಂಜಗಿ, ಶಿವಾನಂದ ನೇಸರಗಿ, ಅನಿಲ ತೇರದಾಳ, ಜಗದೀಶ ರೇವಣ್ಣವರ, ಎಎಸ್ಐ ಬಿ.ಆರ್.ಸಣ್ಣಮಾಳಗೆ, ಆನಂದ ಗೊರವನಕೊಳ್ಳ, ಡಿ.ಡಿ. ನಾಗನಗೌಡರ್ ಹಾಗೂ ದೇವಸ್ಥಾನದ ಅಧಿಕಾರಿ ಮತ್ತು ಸಿಬ್ಬಂದಿ ಈ ವೇಳೆ ಇದ್ದರು.



