ಬೆಂಗಳೂರಿನಲ್ಲಿ ಸೂಕ್ತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ 11 ಮಂದಿ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಬಂಧಿತ ವಿದೇಶಿ ಪ್ರಜೆಗಳನ್ನು ಎಫ್ಆರ್ಆರ್ಓ ಮುಂದೆ ಹಾಜರು ಪಡಿಸಲಾಗಿದೆ. ಅವರ ಆದೇಶದಂತೆ ವಿದೇಶಿ ಬಂಧನ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದರು.
ದೇಶದಿಂದ ಅವರನ್ನು ಗಡಿಪಾರು ಮಾಡುವ ಕಾನೂನು ಕ್ರಮಗಳು ಪ್ರಗತಿಯಲ್ಲಿವೆ. ನಗರದಲ್ಲಿ ಕೆಲವು ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆಂಬ ಮಾಹಿತಿ ಹಿನ್ನಲೆಯಲ್ಲಿ ಡಿಸಿಪಿ ಅಪರಾಧ- 2 ರಾಜಾ ಇಮಾಮ್ ಕಾಸಿಂ ಅವರ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿದ್ದರು.
ಈ ತಂಡ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದೆ 11 ಮಂದಿ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದು ಕಂಡು ಬಂದಿದ್ದು, ಅವರನ್ನು ಬಂಧಿಸಲಾಗಿದೆ ಎಂದರು.
ವಿದೇಶಿಗರಿಗೆ ಮನೆಯನ್ನು ಬಾಡಿಗೆಗೆ ಕೊಡುವ ಮಾಲೀಕರಿಗೆ ಈಗಾಗಲೇ ಕಾನೂನು ಕ್ರಮಗಳನ್ನು ತಿಳಿಸಿದ್ದರೂ ಸಹ ಇಬ್ಬರು ಮನೆ ಮಾಲೀಕರಾದ ಶಿವರಾಮಕೃಷ್ಣ (42) ಮತ್ತು ಸಂಗಪ್ಪ ಪಾಟೀಲ (35) ನಿಯಮಗಳನ್ನು ಉಲ್ಲಂಘಿಸಿದ್ದು, ಅವರ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೇ ಈ ರೀತಿ ನಿಯಮ ಉಲ್ಲಂಘಿಸಿ ಮನೆ ಬಾಡಿಗೆಗೆ ನೀಡಿರುವುದು ದುರಾದೃಷ್ಟಕರ ಎಂದು ಹೇಳಿದರು.
ವಿದೇಶಿಗರಿಗೆ ಮನೆಯನ್ನು ಬಾಡಿಗೆಗೆ ಕೊಡುವಾಗ ಮಾಲೀಕರು ಕಡ್ಡಾಯವಾಗಿ ಕಾನೂನು ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಅವರುಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ಹೇಳಿದ್ದರೂ ಸಹ ಈ ಇಬ್ಬರು ಮನೆ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಈ ಬಗ್ಗೆ ಮನೆ ಮಾಲೀಕರು ಗಮನ ಹರಿಸುವಂತೆ ಆಯುಕ್ತರು ಮತ್ತೊಮೆ ತಿಳಿಸಿದರು.



