ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವ ದರ್ಶನ್ ಅಭಿಮಾನಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಮಹಿಳಾ ಆಯೋಗ ಮುಂದಾಗಿದೆ.
ನಟಿ ರಮ್ಯಾ ಅಶ್ಲೀಲ ಮಸೇಜ್ ಮಾಡಿದವರ ವಿರುದ್ಧ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು. ಇಲ್ಲದೇ ಇದ್ದರೆ ನಾವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಆರೋಪ ಸಾಬೀತಾದರೆ 3 ರಿಂದ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಎಚ್ಚರಿಸಿದ್ದಾರೆ.
ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳುಹಿಸುತ್ತಿರುವ ಕುರಿತು ಬೆಂಗಳೂರಿನಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ರಮ್ಯಾ ಮಾತ್ರವಲ್ಲ, ಬೇರೆ ಎಲ್ಲೇ ಆದರೂ ಇಂತಹ ಕೆಟ್ಟದಾಗಿ ಕಮೆಂಟ್ ಮಾಡಿದ ಬಗ್ಗೆ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ತುಂಬಾ ಜನ ಸೆಲೆಬ್ರಿಟಿಗಳು ನಮ್ಮಲ್ಲಿಗೆ ಬಂದು ದೂರು ಕೊಡುತ್ತಾರೆ. ಯಾರು ಅಶ್ಲೀಲ ಪದವನ್ನು ಬಳಕೆ ಮಾಡಬೇಡಿ. ಯಾವ ಮಹಿಳೆಗೂ ಕೂಡ ಅಗೌರವ ತೋರಬೇಡಿ. ನಿಮ್ಮ ಕೆಟ್ಟ ಪದಬಳಕೆಯಿಂದಾಗಿ ಮುಂದೊಂದು ದಿನ ಜೈಲಿಗೂ ಹೋಗಬಹುದು. ಕಾನೂನಿನ ಪ್ರಕಾರ ಇದು ದೊಡ್ಡ ಅಪರಾಧ. ಈ ರೀತಿ ಒಬ್ಬರನ್ನು ನೋಡಿ ಇನ್ನೊಬ್ಬರು ಮಾಡೋದು ಬೇಡ. ಇದು ಸರಿಯಲ್ಲ. ಒಂದು ವೇಳೆ ರಮ್ಯಾ ದೂರು ದಾಖಲು ಮಾಡಿದರೆ ಖಂಡಿತಾ ಎಫ್ಐಆರ್ ಆಗುತ್ತದೆ. ಬಳಿಕ ಮೂರರಿಂದ ಏಳು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿರುತ್ತದೆ ಎಂದು ಅವರು ಎಚ್ಚರಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ ಪ್ರಕರಣ ಮಾಡಿದರೆ ಅದಕ್ಕೆ ತುಂಬಾ ಗಂಭೀರ ಶಿಕ್ಷೆ ಇದೆ. ಬಹುತೇಕರಿಗೆ ಇದರ ಬಗ್ಗೆ ಅರಿವೇ ಇಲ್ಲ. ಸದ್ಯ ಮಹಿಳಾ ಆಯೋಗ ರಮ್ಯಾ ವಿಚಾರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸ್ ಕಮೀಷನರ್ಗೆ ಪತ್ರ ಬರೆಯಲು ನಿರ್ಧರಿಸಿದೆ. ಇಲ್ಲದೇ ಹೋದರೆ ಇದೇ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ. ಜೊತೆಗೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್ಗಳನ್ನು ಬಹಿರಂಗೊಳಿಸಿದ್ದಾರೆ.



