ಬೆಂಗಳೂರು: ಮನೆಯಲ್ಲಿ ಕಟ್ಟುನಿಟ್ಟಿನಿಂದಿದ್ದು, ಶಿಸ್ತು ಪಾಲಿಸುವಂತೆ ಸದಾ ತಾಕೀತು ಮಾಡುತ್ತಿದ್ದರಿಂದ ಆಕ್ರೋಶಗೊಂಡು ನಿವೃತ್ತ ಯೋಧರಾಗಿದ್ದ ತಂದೆಯನ್ನು ಮಗನೇ ಕೊಲೆಮಾಡಿರುವ ದುರ್ಘಟನೆ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗ ಭಾನುವಾರ ಮುಂಜಾನೆ ನಡೆದಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಯೋಧ ಬೋಲುಅರಬ್ (47) ಕೊಲೆಯಾದವರು. ಕೃತ್ಯ ನಡೆಸಿದ ಪುತ್ರ ಸಮೀರ್ (19) ನನ್ನು ವಿವೇಕನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿವೇಕನಗರದ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಹೊನ್ನಾರ ಪೇಟೆಯ ಮನೆಯೊಂದರಲ್ಲಿ ಬೋಲುಅರಬ್ ಕುಟುಂಬ ವಾಸವಾಗಿದೆ. ಸಮೀರ್ ಸ್ಥಳೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾನೆ.
ಸಮೀರ್ ಸೇರಿದಂತೆ ಮನೆಯಲ್ಲಿ ಎಲ್ಲರೂ ನಿಯಮ ಪಾಲಿಸಬೇಕು ಎಂದು ಬೋಲುಅರಬ್ ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಆದರೆ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಸಮಯಪಾಲನೆ, ಆಚಾರ-ವಿಚಾರದಲ್ಲಿ ಕುಟುಂಬದವರ ಜೊತೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.
ಮಗ ಸಮೀರ್ ಕಾಲೇಜಿಗೆ ತೆರಳಿ ಮನೆಗೆ ತಡವಾಗಿ ಬಂದಾಗಲೆಲ್ಲ ಪ್ರಶ್ನಿಸುತ್ತಿದ್ದರು ಮತ್ತು ಅನಗತ್ಯವಾಗಿ ಹಣ ವೆಚ್ಚ ಮಾಡಬಾರದೆಂದು ಬುದ್ದಿ ಮಾತು ಹೇಳುತ್ತಿದ್ದರು. ಆದರೆ ಇದು ಮಗ ಸಮೀರ್ಗೆ ಇಷ್ಟವಾಗುತ್ತಿರಲಿಲ್ಲ. ಇದೇ ವಿಚಾರದಲ್ಲಿ ತಂದೆ ಮಗನ ಜೊತೆ ಈವಾಗ್ವಾದ ನಡೆಯುತಿತ್ತು.
ಕಳೆದ ರಾತ್ರಿ ಇದೇ ವಿಚಾರಕ್ಕೆ ಜಗಳ ನಡೆದು ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಅಪ್ಪನ ಕುತ್ತಿಗೆ ಹಿಸುಕಿ ಮಗನೇ ಕೊಲೆ ಮಾಡಿದ್ದಾನೆ. ನಂತರ ಯಾರೋ ಐದಾರು ಜನ ಬಂದು ಹಲ್ಲೆ ಮಾಡಿ ಹೋದರು ಎಂದು ಪೊಲೀಸರಿಗೆ ತಿಳಿಸಿದ್ದ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳೀಯ ಸಿಸಿ ಟಿವಿಗಳನ್ನು ನೋಡಿ ಪರಿಶೀಲನೆ ನಡೆಸಿದಾಗ ಯಾರೂ ಕೂಡ ಮನೆಯ ಒಳಗೆ ಬಾರದಿರುವುದನ್ನು ಅರಿತು ಸಮೀರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಘಟನೆ ಸಂದರ್ಭದಲ್ಲಿ ಮಗನಿಗೆ ತಾಯಿ ಸಹಕಾರ ನೀಡಿರಬಹುದೆಂದು ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ತಾಯಿ ಕೊಂದ ಮಗ:
ಮದ್ಯ ಸೇವನೆಗೆ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಹೆತ್ತ ತಾಯಿಯನ್ನೇ ಮಗ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರ ಗ್ರಾಮದಲ್ಲಿ ನಡೆದಿದೆ.
ನವಿಲೂರ ಗ್ರಾಮದ ಜಯಮ್ಮ (60)ರನ್ನು ಕೊಲೆಗೈದು ಪರಾರಿಯಾಗಿದ್ದ ಪುತ್ರ ಸ್ವಾಮಿ (40)ಯನ್ನು ಪೊಲೀಸರು ಬಂಧಿಸಿದ್ದಾರೆ.
ಪತಿಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ಯಲು ಜಯಮ್ಮ 90 ಸಾವಿರ ರೂ ಹಣ ಕೂಡಿಟ್ಟಿದ್ದರು. ಇದೇ ಹಣ ನೀಡುವಂತೆ ಮಗ ಪದೇ ಪದೇ ಪೀಡಿಸುತ್ತಿದ್ದ.
ಅತ್ತ ತಂದೆ ಆಸ್ಪತ್ರೆಗೆ ತೆರಳಿದ ವೇಳೆ ಇತ್ತ ಮಗ ತನ್ನ ತಾಯಿಯನ್ನು ಕೈಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



