ಕ್ರಿಕೆಟ್ ಬಾಲ್ ವಿಷಯಕ್ಕೆ ಯುವಕನೊಬ್ಬ ಶಿಕ್ಷಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.
ಸಾವಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾವಳಗಿ ಗ್ರಾಮದ ಬಿ.ಎಲ್.ಡಿ.ಇ ಶಾಲೆಯ ಶಿಕ್ಷಕ ರಾಮು ಪೂಜಾರಿ ಮೇಲೆ ಪಕ್ಕದ ಮನೆಯ ಯುವಕ ಪವನ್ ಜಾಧವ್ ಹಲ್ಲೆ ನಡೆಸಿದ್ದಾನೆ.
ಶಿಕ್ಷಕನ ಮನೆಯ ಒಳಗೆ ಕ್ರಿಕೆಟ್ ಚೆಂಡು ಬಿದ್ದಿದೆ ಕೊಡು ಎಂದು ಯುವಕ ಪ್ರಶ್ನಿಸಿದ್ದಾನೆ. ಆದರೆ ಚೆಂಡು ಮನೆಯಲ್ಲಿ ಬಿದ್ದಿಲ್ಲ ಎಂದು ಶಿಕ್ಷಕ ಉತ್ತರಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ಪವನ್ ಜಾಧವ್ ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ರಾಮು ಪೂಜಾರಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಈ ಹಿಂದೆ ಶಿಕ್ಷಕ ಬೈದು ಬುದ್ದಿವಾದ ಹೇಳಿದ್ದರಂತೆ. ಇದರಿಂದ ದ್ವೇಷ ಹೊಂದಿದ್ದ ಪವನ್ ಈ ಅವಕಾಶ ಬಳಸಿಕೊಂಡು ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಾವಳಗಿ ಠಾಣೆಯ ಪೊಲೀಸರು ಯುವಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



