Sunday, May 31, 2026
Google search engine
Homeರಾಜ್ಯಎಂಎಸ್ ಎಂಇ ಪ್ರತ್ಯೇಕ ಇಲಾಖೆ ರಚನೆ: ಸಿದ್ದರಾಮಯ್ಯ

ಎಂಎಸ್ ಎಂಇ ಪ್ರತ್ಯೇಕ ಇಲಾಖೆ ರಚನೆ: ಸಿದ್ದರಾಮಯ್ಯ

ಬೆಂಗಳೂರು: ಮುಂದಿನ ದಿನಗಳಲ್ಲಿ ಎಂಎಸ್ ಎಂಇ (MSME) ಪ್ರತ್ಯೇಕ ಇಲಾಖೆ ರಚಿಸಿ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ವತಿಯಿಂದ ಬೆಂಗಳೂರಿನ ಜ್ಞಾನಭಾರತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಅಮೃತ ಮಹೋತ್ಸವ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಬೇಡಿಕೆಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ ಸಭೆ ಕರೆದು ಈ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉದ್ಯೋಗಗಳಿಗೆ ಅಭ್ಯರ್ಥಿಗಳಿಗನ್ನು ತರಬೇತಿ ನೀಡಿ ತಯಾರು ಮಾಡಬೇಕು. ಕೌಶಲ್ಯಾಭಿವೃದ್ಧಿ ಅತ್ಯಗತ್ಯ ಎಂದು ಮನಗಂಡು ಈ ನಿಟ್ಟಿನಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತಿದೆ ಎಂದರು.

ಅಮೃತ ಮಹೋತ್ಸವ ಪ್ರಮುಖವಾದ ಮೈಲಿಗಲ್ಲು

1947 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಆರಾಧ್ಯ ಅವರು15 ಜನ ಸದಸ್ಯಯರನ್ನೊಳಗೊಂಡ ಈ ಸಂಸ್ಥೆಯನ್ನು ಸಣ್ಣ ಕೊಠಡಿಯೊಂದರಲ್ಲಿ ಪ್ರಾರಂಭಿಸಿದ್ದು, ಇಂದು 13 ಸಾವಿರ ಸದಸ್ಯರನ್ನು ಹೊಂದಿದೆ. ಅಮೃತ ಮಹೋತ್ಸವ ಸಮಾರಂಭದಲ್ಲಿ ಕನಿಷ್ಠ ಒಂದು ಸಾವಿರ ಜನರಾದರೂ ಭಾಗವಹಿ ಸಬೇಕಿತ್ತು ಎಂದು ಅಭಿಪ್ರಾಯ ಪಟ್ಟರು. ಸಂಘಟನೆಯ ದೃಷ್ಟಿಯಿಂದ ರಜತ, ಸುವರ್ಣ ಹಾಗೂ ಅಮೃತ ಮಹೋತ್ಸವ ಪ್ರಮುಖವಾದ ಮೈಲಿಗಲ್ಲುಗಳು. ಸಂಸ್ಥೆಯ ಸದಸ್ಯತ್ವ ಒಂದು ಲಕ್ಷಕ್ಕೆ ಏರಲಿ ಎಂದ ಮುಖ್ಯಮಂತ್ರಿಗಳು ಎಂ.ಎಸ್.ಎಂ. ಇ ಗಳು ಬೆಳೆದಂತೆಲ್ಲ ರಾಜ್ಯದ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಕಾಸಿಯಾ ರಾಜ್ಯದ ಅಭಿವೃದ್ಧಿಯ ಪಾಲುದಾರ

ಕಾಸಿಯಾ ಕೇವಲ ಉದ್ಯೋಗದಾತ ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿಯ ಪಾಲುದಾರ ಕೂಡ ಹೌದು. ರಾಜ್ಯದ ಅಭಿವೃದ್ಧಿಯಾದಂತೆ ತಲಾದಾಯ ಕೂಡ ಹೆಚ್ಚಾಗುತ್ತದೆ. ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ. 20 ಲಕ್ಷ ಕ್ಕೂ ಹೆಚ್ಚು ಎಂ.ಎಸ್.ಎಂ. ಇ ಗಳು ಸೇರಿ 185 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಜಿಸಲಾಗಿದೆ. ಇದು ಇನ್ನೂ ಹೆಚ್ಚಾಗಬೇಕೆಂದು ಬಯಸುತ್ತೇನೆ ಎಂದರು.

ಹೆಚ್ಚು ಉದ್ಯೋಗ ನೀಡುವುದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು

ಕರ್ನಾಟಕದಲ್ಲಿ 7 ಕೋಟಿ ಜನಸಂಖ್ಯೆ ಇದೆ. ಕೃಷಿ ಕ್ಷೇತ್ರವನ್ನು ಬಿಟ್ಟರೆ ಹೆಚ್ಚು ಉದ್ಯೋಗ ನೀಡುವುದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು. ಹಿಂದೆ ದಾಬಸ್ ಪೇಟೆಯಲ್ಲಿ 400 ಎಕರೆ ಕಾಸಿಯಾದವರಿಗೆ ಮಂಜೂರು ಮಾಡಿದ್ದನ್ನು ಸಿಎಂ ಸ್ಮರಿಸಿದರು. ಮಾರುಕಟ್ಟೆ ದರದ ಅರ್ಧದಷ್ಟು ದರದಲ್ಲಿ ಇದನ್ನು ಮಂಜೂರು ಮಾಡಿದ್ದು, ಕೌಶಲ್ಯ ಅಭಿವೃದ್ಧಿ ನೀಡುವ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಸರ್ಕಾರ ಮೊದಲಿನಿಂದಲೂ ಕಾಸಿಯಾ ಸಂಸ್ಥೆಗೆ ಬೆಂಬಲ ನೀಡುತ್ತಾ ಬಂದಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕು.ಈ ಬಗ್ಗೆ ಆಸಕ್ತಿ ಮತ್ತು ಶಕ್ತಿ ಎರಡೂ ಇರಬೇಕು ಎಂದರು.ರಾಜ್ಯದ ಜನಸಂಖ್ಯೆಯನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಬೇಕು.ಆಗ ಮಾತ್ರ ಸಮಾನತೆ ತರಲು ಸಾಧ್ಯ ಎಂದರು. ಅರ್ಹತೆ ಇಲ್ಲದವರಿಗೆ ತರಬೇತಿ ನೀಡಬೇಕು. ಕೆಲಸಕ್ಕೆ ಯೋಗ್ಯರನ್ನಾಗಿಸಬೇಕು ಎಂದರು.

ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಯಾಗುತ್ತದೆ ಎಂದರು. ರಾಜ್ಯದಿಂದ 4.50 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ಹೋಗುತ್ತಿದೆ. 65-70ಸಾವಿರ ಕೋಟಿ ಮಾತ್ರ ನಮಗೆ ವಾಪಸ್ಸು ಬರುತ್ತದೆ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ ಎಂದು ರಾಜ್ಯಕ್ಕೆ ಅನ್ಯಾಯವಾಗಬಾರದು ಎಂದರು. ರಾಜ್ಯ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ರಾಜ್ಯಗಳು ಸೊರಗಿದರೆ ಕೇಂದ್ರವೂ ಸೊರಗುತ್ತದೆ ಎಂದರು. ಕೇಂದ್ರ ಸರ್ಕಾರ ಕನಿಷ್ಠ 50% ತೆರಿಗೆಯ ಪಾಲನ್ನು ರಾಜ್ಯಕ್ಕೆ ಕೊಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ದೇಶದಲ್ಲಿ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು. ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆಗೆ ಯತ್ನಿಸಲಾಗುತ್ತಿದೆ. ಕೈಗಾರಿಕೆಗಳ ಹೂಡಿಕೆಗೂ ಕಾನೂನು ಸುವ್ಯಸ್ಥೆಗೂ ನೇರವಾದ ಸಂಬಂಧವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಣ್ಣ ಕೈಗಾರಿಕೆಗಳ ಹಾಗು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣ ಬಸಪ್ಪ ದರ್ಶನಾಪುರ, ಶಾಸಕ ರಘುಮೂರ್ತಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ , ಕಾಸಿಯಾ ಅಧ್ಯಕ್ಷ ರಾಜಗೋಪಾಲ್, ಉಪಾಧ್ಯಕ್ಷ, ಗಣೇಶ್ ರಾವ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments