ಕನ್ನಡ ಚಿತ್ರರಂಗದ ಮೇರುನಟಿಯರಲ್ಲಿ ಒಬ್ಬರಾಗಿದ್ದ ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ.ಸರೋಜಾದೇವಿ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ತಮಿಳಿನ ಎಂಜಿಆರ್. ಶಿವಾಜಿ ಗಣೇಶನ್, ತೆಲುಗಿನ ನಾಗೇಶ್ವರ್ ರಾವ್, ಎನ್.ಟಿ.ರಾಮರಾವ್, ಜೆಮಿನಿ ಗಣೇಶನ್, ಹಿಂದಿಯಲ್ಲಿ ಶಮ್ಮಿಕಪೂರ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್ ಮತ್ತು ಸುನಿಲ್ ದತ್ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಹಲವು ಭಾಷೆಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆಯಾಗಿದ್ದ ಬಿ. ಸರೋಜಾದೇವಿ ಅಗಲಿದ್ದಾರೆ.
1958ರಲ್ಲಿ 17ನೇ ವಯಸ್ಸಿಗೆ ಹೊನ್ನಪ್ಪ ಭಾಗವತಾರ್ ಅವರ ಮಹಾಕವಿ ಕಾಳಿದಾಸ ಚಿತ್ರದ ಮುಲಕ ಚಿತ್ರರಂಗ ಪ್ರವೇಶಿಸಿದ ಸರೋಜಾದೇವಿ 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, 2019ರಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ನಟ ‘ಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರವಾಗಿದೆ.
ಬಬ್ರುವಾಹನ ಕಿತ್ತೂರು ರಾಣಿ ಚೆನ್ನಮ್ಮ, ರತ್ನಗಿರಿ ರಹಸ್ಯ, ಮಲ್ಲಮ್ಮನ ಪವಾಡ, ಭಾಗ್ಯವಂತರು, ಭೂಕೈಲಾಸ, ವಿಜಯನಗರದ ವೀರಪುತ್ರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದವು.
ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ಕೋಕಿಲವಾಣಿ, ಸ್ಕೂಲ್ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ದೇವಸುಂದರಿ, ವಿಜಯನಗರದ ವೀರಪುತ್ರ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮುಂತಾದ ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು.
ಟಿವಿ ನೋಡುತ್ತಲೇ ಚಿರನಿದ್ರೆಗೆ ಜಾರಿ ನಟಿ
ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ಪೇಪರ್ ಓದಿದ ನಂತರ ಸ್ವಲ್ಪ ಹೊತ್ತು ಟಿವಿ ನೋಡುತ್ತಿದ್ದರು. ನಂತರ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ಸೇವಿಸುತ್ತಿದ್ದರು. ಆದರೆ ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಟಿವಿ ಹಾಕಿದ ಸ್ವಲ್ಪ ಹೊತ್ತಿನಲ್ಲೇ ಅಸ್ವಸ್ಥರಾಗಿ ಕುಸಿದು ಕುಳಿತುಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.


