ಬೆಂಗಳೂರು: ಕನ್ನಡ ಚಿತ್ರರಂಗದ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಮಿಂಚಿದ್ದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್ ರಾಜ್ 47ನೇ ವಯಸ್ಸಿಗೆ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ.
ಮಿಲನ, ಯೂಟರ್ನ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದಿಲೀಪ್ ರಾಜ್, ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟನೆ ಹಾಗೂ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಜನಪ್ರಿಯರಾಗಿದ್ದರು.
ಮಂಗಳವಾರ ರಾತ್ರಿ ಸಹಜವಾಗಿಯೇ ಆರೋಗ್ಯವಾಗಿದ್ದ ದಿಲೀಪ್ ರಾಜ್ ಬುಧವಾರ ಮುಂಜಾನೆ 5.20ರ ಸುಮಾರಿಗೆ ಉಸಿರಾಟದ ಸಮಸ್ಯೆ ಹಾಗೂ ಎದೆನೋವಿನಿಂದ ಬಳಲುತ್ತಿದ್ದು, ಮಗಳು ಪ್ರಥಮ ಚಿಕಿತ್ಸೆ ನೀಡಿ ಪ್ರಯತ್ನಿಸಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆದಲ್ಲಿ ನಿಧನರಾಗಿದ್ದಾರೆ.
2005ರಲ್ಲಿ ಬಿಡುಗಡೆಯಾದ ಬಾಯ್ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಿಲನ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು.
ಸುಗ್ರೀವ, ಗೆಳೆಯ, ಯೂಟರ್ನ್, ಸೇರಿದಂತೆ 28 ಚಿತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ಸದ್ಯ ಜನಪ್ರಿಯ ಧಾರಾವಾಹಿ `ಕೃಷ್ಣ ರುಕ್ಕು’ ಧಾರವಾಹಿ ಪ್ರೊಡ್ಯೂಸ್ ಮಾಡುತ್ತಿದ್ದರು. 47 ವರ್ಷದ ದಿಲೀಪ್ ರಾಜ್ ಕೊನೆಯದಾಗಿ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಮನೆಯೊಂದು ಮೂರು ಬಾಗಿಲು, ರಥಸಪ್ತಮಿ, ಪ್ರೀತಿಗಾಗಿ ಧಾರಾವಾಹಿಗಳಲ್ಲೂ ನಟಿಸಿದ್ದರು.
ಗಣ್ಯರ ಕಂಬನಿ
ನಟ ಗಣೇಶ್, ರವಿಶಂಕರ್, ನಟಿ ಮಲೈಕಾ, ಸಂಗೀತ ನಿರ್ದೇಶಕ ಹಂಸಲೇಖಾ ಸೇರಿದಂತೆ ಹಲವು ಗಣ್ಯರು ದಿಲೀಪ್ ರಾಜ್ ಅಂತಿಮ ದರ್ಶನ ಪಡೆದರು. ಅಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಕಿರುತೆರೆ ಹಾಗೂ ಬೆಳ್ಳಿ ತೆರೆಯ ಕಲಾವಿದರು ಆಘಾತ ವ್ಯಕ್ತಪಡಿಸಿದರು.
ಅಂತ್ಯಕ್ರಿಯೆ
ದಿಲೀಪ್ ರಾಜ್ ಅಂತ್ಯಕ್ರಿಯೆ ರಾಮನಗರದ ಗುನ್ನೂರು ಬಳಿಯ ಫಾರ್ಮ್ಹೌಸ್ನಲ್ಲಿ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.
10 ವರ್ಷಗಳ ಹಿಂದೆ ನಟ ದಿಲೀಪ್ ರಾಜ್ 1 ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ತೋಟ ನಿರ್ಮಾಣ ಮಾಡಿಕೊಂಡು ಮನೆ ಕಟ್ಟಿದ್ದರು. ತಿಂಗಳಿಗೊಮ್ಮೆ ಫಾರ್ಮ್ಹೌಸ್ಗೆ ಭೇಟಿ ನೀಡುತ್ತಿದ್ದರು. ಇದೇ ಜಾಗದಲ್ಲಿ ಅಂತ್ಯಕ್ರಿಯೆ ಜರುಗಿತು.
ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ದಿಲೀಪ್ ರಾಜ್ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದರು. ಆ ಪಾತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು.



