Sunday, June 7, 2026
Google search engine
Homeರಾಜ್ಯಹಿಜಾಬ್ ನಿಷೇಧ ತೆರವು: ಜನಿವಾರ, ರುದ್ರಾಕ್ಷಿ ಶಿವದಾರಕ್ಕೆ ಅನುಮತಿ: ರಾಜ್ಯ ಸರ್ಕಾರ ಮಹತ್ವದ ಆದೇಶ

ಹಿಜಾಬ್ ನಿಷೇಧ ತೆರವು: ಜನಿವಾರ, ರುದ್ರಾಕ್ಷಿ ಶಿವದಾರಕ್ಕೆ ಅನುಮತಿ: ರಾಜ್ಯ ಸರ್ಕಾರ ಮಹತ್ವದ ಆದೇಶ

ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಹಿಜಾಬ್’ (ಶಿರವಸ್ತ್ರ) ವಿವಾದಕ್ಕೆ ರಾಜ್ಯ ಸರ್ಕಾರವು ಬುಧವಾರ ಅಧಿಕೃತವಾಗಿ ತೆರೆ ಎಳೆದಿದೆ.

ಕಳೆದ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧಕ್ಕೆ ಪೂರಕವಾಗಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂಪಡೆದು ಬುಧವಾರ ರಂದು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. 05.02.2022 ಹೊರಡಿಸಲಾಗಿದ್ದ ಸಮವಸ್ತ್ರ ಸಂಹಿತೆಯ ಆದೇಶವನ್ನು ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.

ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಮತ್ತು ಸಾಂವಿಧಾನಿಕ ಮೌಲ್ಯಗಳ ವೃದ್ಧಿಗೆ ಪೂರಕವಾಗಿರಬೇಕು. ಯಾವುದೇ ಧರ್ಮ ಅಥವಾ ಸಂಪ್ರದಾಯದ ಆಚರಣೆಯು ವಿದ್ಯಾರ್ಥಿಯ ಶಿಕ್ಷಣದ ಹಕ್ಕಿಗೆ ಅಡ್ಡಿಯಾಗಬಾರದು’ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪೇಟ, ರುದ್ರಾಕ್ಷಿಗೂ ಅವಕಾಶ:

ಸರ್ಕಾರದ ಹೊಸ ಆದೇಶದ ಪ್ರಕಾರ, ಶಾಲಾ-ಕಾಲೇಜುಗಳು ನಿಗದಿಪಡಿಸಿದ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡಲಾಗಿದೆ.
ಇದರಲ್ಲಿ ಜನಿವಾರ ಅಥವಾ ಪವಿತ್ರ ದಾರ ಶಿವದಾರ ಮತ್ತು ರುದ್ರಾಕ್ಷಿ ಇವುಗಳನ್ನು ಧರಿಸುವುದರಿಂದ ಶಾಲೆಯ ಶಿಸ್ತು ಅಥವಾ ಬೋಧನಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಹೊಸ ಆದೇಶದ ಅಡಿಯಲ್ಲಿ ಅತ್ಯಂತ ಮಹತ್ವದ ಅಂಶವೆಂದರೆ, ಯಾವುದೇ ವಿದ್ಯಾರ್ಥಿನಿಯು ಹಿಜಾಬ್ ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಶಿಕ್ಷಣವನ್ನು ನಿರಾಕರಿಸುವಂತಿಲ್ಲ.

ತರಗತಿ ಪ್ರವೇಶ ಅಥವಾ ಪರೀಕ್ಷಾ ಕೊಠಡಿಗಳಿಗೆ ಇಂತಹ ಸಂಪ್ರದಾಯಿಕ ಸಂಕೇತಗಳೊಂದಿಗೆ ಪ್ರವೇಶವನ್ನು ನಿರ್ಬಂಧಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ, ಈ ಸಂಕೇತಗಳು ವಿದ್ಯಾರ್ಥಿಯ ಗುರುತಿಸುವಿಕೆಗೆ  ಯಾವುದೇ ತೊಂದರೆ ನೀಡಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.

‘ಇವ ನಮ್ಮವ’ ತತ್ವ:

ಆದೇಶದಲ್ಲಿ ಸರ್ಕಾರವು ಜಗಜ್ಯೋತಿ ಬಸವಣ್ಣನವರ ‘ಇವ ನಮ್ಮವ’ ಎಂಬ ತತ್ವವನ್ನು ಪ್ರಸ್ತಾಪಿಸಿದೆ. ಶಿಕ್ಷಣ ಸಂಸ್ಥೆಗಳು ಕೇವಲ ಬೋಧನಾ ಕೇಂದ್ರಗಳಾಗದೆ, ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಗೌರವವನ್ನು ಕಲಿಯುವ ಕೇಂದ್ರಗಳಾಗಬೇಕು. ಎಲ್ಲರನ್ನೂ ಒಳಗೊಳ್ಳುವ ಮನೋಭಾವವನ್ನು ಬೆಳೆಸಲು ಈ ಹೊಸ ಆದೇಶ ಸಹಾಯ ಮಾಡಲಿದೆ ಎಂದು ಸರ್ಕಾರ ಆಶಯ ವ್ಯಕ್ತಪಡಿಸಿದೆ.

ಮಾರ್ಗಸೂಚಿಗಳು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ-ಕಾಲೇಜುಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯವಾಗಲಿವೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಈ ಆದೇಶದ ಮೂಲಕ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಸಮವಸ್ತ್ರ ಮತ್ತು ಹಿಜಾಬ್ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ವಿದ್ಯಾರ್ಥಿಗಳು ಧಾರ್ಮಿಕ ನಂಬಿಕೆ ಮತ್ತು ಶಿಕ್ಷಣ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯಲು ಈ ಹೊಸ ನೀತಿ ಪೂರಕವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments