ಬೆಂಗಳೂರು:ನಗರದ ಫ್ರೀಡಂ ಪಾರ್ಕ್ ನಲ್ಲಿ ಶುಕ್ರವಾರವಾದ ಇಂದು ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಪ್ರತಿಭಟನೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಅಭಿಮಾನಿಗಳು ಆಗಮಿಸಲಿದ್ದಾರೆ. ಜೊತೆಗೆ, ರಾಜ್ಯಮಟ್ಟದ, ರಾಷ್ಟ್ರಮಟ್ಟದ ನಾಯಕರು ಆಗಮಿಸುವ ನಿರೀಕ್ಷೆಯಿದೆ.
ಇದರ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತಲೂ ಅಪಾರ ಸಂಖ್ಯೆಯಲ್ಲಿ ಜನರ ಜಮಾವಣೆಯಾಗುವುದರಿಂದ, ಫ್ರೀಡಂ ಪಾರ್ಕ್ ಮಾತ್ರವಲ್ಲದೆ ಹತ್ತಿರದ ಪ್ರಾಂತ್ಯಗಳಲ್ಲಿನ ಅನೇಕ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಜೊತೆಗೆ, ಕೆಲವು ರಸ್ತೆಗಳಲ್ಲಿನ ಸಂಚಾರವನ್ನೂ ಬದಲಾಯಿಸಲಾಗಿದೆ.
ಬೆಳಗ್ಗೆ 10.30ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ?
ಶಾಂತಲಾ ಜಂಕ್ಷನ್ – ಖೋಡೆ ಸರ್ಕಲ್ ನಿಂದ ಆನಂದರಾವ್ ಫ್ಲೈ ಓವರ್ – ಓಲ್ಡ್ ಜೆಡಿಎಸ್ ಕ್ರಾಸ್ – ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಲುಲು ಮಾಲ್ – ಕೆಎಫ್ಎಂ – ರಾಜೀವ್ ಗಾಂಧಿ ಸರ್ಕಲ್ – ಮಂತ್ರಿ ಮಾಲ್ – ಸ್ವಸ್ತಿಕ್ ಸರ್ಕಲ್, ಶೇಷಾದ್ರಿ ಪುರಂ, ನೆಹರೂ ಸರ್ಕಲ್, ರೇಸ್ ಕೋರ್ಸ್, ಫ್ಲೈ ಓವರ್ – ರೇಸ್ ಕೋರ್ಸ್ ರಸ್ತೆ ಮೂಲಕ ಸಂಚರಿಸುವಂತೆ ಕೋರಲಾಗಿದೆ.
ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ರಸ್ತೆ ಮೂಲಕ ಹೋಗಬೇಕಾದ ವಾಹನಗಳು ಕೆಜಿ ರಸ್ತೆ – ಮೈಸೂರು ಬ್ಯಾಂಕ್ ಸರ್ಕಲ್ ಜಂಕ್ಷನ್ – ಸಾಗರ್ ಜಂಕ್ಷನ್ – ಕೆಜೆ ಜಂಕ್ಷನ್ – ಎಲೈಟ್ – ಟಿಬಿ ರಸ್ತೆ – ಕೆಎಫ್ಎಂ – ರಾಜೀವ್ ಗಾಂಧಿ ಸರ್ಕಲ್ – ಸ್ವಸ್ತಿಕ್ – ನೆಹರೂ ಸರ್ಕಲ್ – ರೇಸ್ ಕೋರ್ಸ್ ರಸ್ತೆ – ಫ್ಲೈಓವರ್ ರಸ್ತೆ ಮೂಲಕ ಸಂಚರಿಸಬೇಕು. ಚಾಲುಕ್ಯ ಸರ್ಕಲ್ ನಿಂದ ಮೈಸೂರು ಬ್ಯಾಂಕ್ ಕಡೆಗೆ ಹೋಗುವ ವಾಹನಗಳು ಚಾಲುಕ್ಯ ಸರ್ಕಲ್ – ಎಲ್ಆರ್ ಡಿ – ರಾಜಭವನ ರಸ್ತೆ – ಇನ್ ಫೆಂಟ್ರಿ ರಸ್ತೆ – ಇಂಡಿಯನ್ ಎಕ್ಸ್ ಪ್ರೆಸ್ ರಸ್ತೆ ಮೂಲಕ ತೆರಳಬೇಕಿದೆ.
ಕಾಳಿದಾಸ ರಸ್ತೆ – ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಕನಕದಾಸ ಜಂಕ್ಷನ್ ಬಲ ತಿರುವು ಪಡೆದು ಸಾಗರ ಜಂಕ್ಷನ್ ಕಡೆಗೆ ಸಂಚರಿಸಬೇಕಿದೆ. ಮೌರ್ಯ/ಸುಬ್ಬಣ್ಣ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಸುಬ್ಬಣ್ಣ ಜಂಕ್ಷನ್ ಕಡೆಯಿಂದ ಬಲ ತಿರುವು ಪಡೆದು ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.



