ಕಳೆದ 30 ದಿನಗಳಿಂದ ಬೆಳಕನ್ನೇ ನೋಡಿಲ್ಲ. ಹೀಗೆ ನಡೆಸಿಕೊಳ್ಳುವ ಬದಲು ನನಗೆ ಪಾಯಿಸನ್ ಕೊಟ್ಟುಬಿಡಿ ಎಂದು ನಟ ದರ್ಶನ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಮಂಗಳವಾರ ವಿಚಾರಣೆಗೆ ಹಾಜರಾದಾಗ, ‘ನನಗೆ ವಿಷ ನೀಡಲು ಆದೇಶಿಸಿ ಎಂದು ನ್ಯಾಯಾಧೀಶರ ಮುಂದೆ ಕೇಳಿದ್ದಾರೆ. ದರ್ಶನ್ ಬೇಡಿಕೆ ಕೇಳಿ ಆಘಾತಕ್ಕೆ ಒಳಗಾದ ನ್ಯಾಯಾಧೀಶರು, ‘ಹಾಗೆಲ್ಲ ಕೇಳಬಾರದು’ ಎಂದು ಜಡ್ಜ್ ದರ್ಶನ್ಗೆ ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಇಡಲಾಗಿದೆ. ವಿಶೇಷ ಸವಲತ್ತು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಿನ ಕಠಿಣ ನಿಯಮಗಳಿಂದ ಅವರಿಗೆ ನರಕಯಾತನೆ ಉಂಟಾಗುತ್ತಿದೆ.
ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ವಿಡಿಯೋ ಕಾಲ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಾದರು. ಆಗ ಅವರು, ಮೊದಲಿಗೆ ಕೈ ಎತ್ತಿ ‘ಒಂದು ಮನವಿ ಇದೆ’ ಎಂದು ಹೇಳಿದ್ದಾರೆ. ಮನವಿ ಏನು ಎಂದು ಕೇಳಿದಾಗ, ದರ್ಶನ್ ಕೊಟ್ಟ ಉತ್ತರ ಜಡ್ಜ್ಗೆ ಶಾಕ್ ತಂದಿತು.
ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ನೀಡಲಿ. ಕೋರ್ಟ್ನಿಂದಲೇ ಈ ಆದೇಶ ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದಾರೆ.
ಆಗ ನ್ಯಾಯಾಧೀಶರು ‘ಹಾಗೆಲ್ಲಾ ನೀವು ಕೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ ಎಂದು ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ದಾರೆ.
ನಂತರ ಮಧ್ಯಾಹ್ನ ವಿಚಾರಣೆ ನಡೆಸಿದ ನ್ಯಾಯಾಧೀಶರು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಅರ್ಜಿಯನ್ನು ತಿರಸ್ಕರಿಸಿದ್ದು, ಜೈಲಿನ ಹೊರಗೆ ಓಡಾಲು ಅನುಮತಿ ನೀಡಿದ್ದಾರೆ. ಅಲ್ಲದೇ ದಿಂಬು ಮತ್ತು ಹಾಸಿಗೆ ನೀಡಲು ಅನುಮತಿ ನೀಡಿದ್ದಾರೆ.
ಜೈಲಿನ ಕೈಪಿಡಿಯಂತೆ ಜೈಲಿನ ಹೊರಗೆ ಓಡಾಡಬಹುದು. ಬಳ್ಳಾರಿ ಜೈಲಿಗೆ ಕಳುಹಿಸಲು ಯಾವುದೇ ಸಕಾರಣಗಳಿಲ್ಲ. ಆದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಬಹುದು. ಅಲ್ಲದೇ ಜೈಲು ನಿಯಮ ಮೀರಿದರೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಹಕ್ಕು ಜೈಲಾಧಿಕಾರಿಗೆ ಇರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.



