ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸೋದರರು ಸಾವಿನಲ್ಲೂ ಒಂದಾದ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಸಂಭವಿಸಿದೆ.
ಕಪರಟ್ಟಿ ಗ್ರಾಮದಲ್ಲಿ ಶನಿವಾರ ಮುಂಜಾನೆ 10ನೇ ತರಗತಿ ವಿದ್ಯಾರ್ಥಿ ಬಾಲಕ ಸತೀಶ ಬಾಗನ್ನವರ್ (16) ಮುಂಜಾನೆ 4 ಗಂಟೆಗೆ ಅನಾರೋಗ್ಯದಿಂದಾಗಿ ಮೃತಪಟ್ಟ. ಈ ಸುದ್ದಿ ಕೇಳಿ ಅಣ್ಣ ಬಸವರಾಜ ಬಾಗನ್ನವರ್ (24) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸತೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆತ ಬದುಕುಳಿಯಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಬಸವರಾಜ ಕುಸಿದು ಬಿದ್ದಿದ್ದಾರೆ. ಆಗ ಬಸವರಾಜ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೆ ಸತೀಶ್ ಅವರ ಸಾವಿನ ಸುದ್ದಿ ಬಂದಿದೆ. ಈ ಸುದ್ದಿ ಕೇಳಿದ ತಕ್ಷಣವೇ ಬಸವರಾಜ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾರೆ.
ಮೈದುನ ಮತ್ತು ಗಂಡನ ಸಾವಿನ ಸುದ್ದಿ ಕೇಳಿದ ಬಸವರಾಜ ಪತ್ನಿ ತುಂಬು ಗರ್ಭಿಣಿಯಾಗಿದ್ದ ಪವಿತ್ರಾ ಬಸವರಾಜ ಬಾಗನ್ನವರ್ (20) ಕೂಡ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಗೋಕಾಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅದೃಷ್ಟವಶಾತ್ ಪವಿತ್ರಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇಬ್ಬರು ಗಂಡು ಮಕ್ಕಳು ತಮ್ಮ ಕಣ್ಮುಂದೆಯೇ ಜೀವ ಕಳೆದುಕೊಂಡಿರುವುದು ಅವರ ತಂದೆ – ತಾಯಿಗೆ ಬರಸಿಡಿಲು ಬಡಿದಂತೆ ಆಗಿದೆ. ಸತೀಶ್ 10ನೇ ತರಗತಿಯಲ್ಲಿ ಓದುತ್ತಿದ್ದನು. ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಮನೆ ನಡೆಸುತ್ತಿದ್ದ. ಈಗ ಮನೆಗೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡು ಇಡೀ ಕುಟುಂಬ ಅನಾಥವಾಗಿದೆ



