ಸ್ನಾನ ಮಾಡಲು ಇಬ್ಬರು ಸಹೋದರಿಯರು ಒಟ್ಟಿಗೆ ಬಚ್ಚಲು ಮನೆಗೆ ಹೋದಾಗ ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮೈಸೂರು ಜಿಲ್ಲೆಯ ಪಿರಿಯಾಣಪಟ್ಟಣದಲ್ಲಿ ಗ್ಗೆ ಸಂಭವಿಸಿದೆ.
ಪಿರಿಯಾಪಟ್ಟಣದಲ್ಲಿ ವಾಸವಾಗಿರುವ ಬೆಟ್ಟದಪುರ ಮೂಲದ ಅಲ್ತಾಫ್ ಪಾಷಾ ಅವರ ನಿಶ್ಚಿತಾರ್ಥ ಆಗಿದ್ದ ಎರಡನೇ ಮಗಳು ಗುಲ್ಬಮ್ ತಾಜ್ (23) ಮತ್ತು ನಾಲ್ಕನೇ ಮಗಳಾದ ಸಿಮ್ರಾನ್ ತಾಜ್ (21) ಮೃತಪಟ್ಟಿದ್ದಾರೆ.
ಪಿರಿಯಾಪಟ್ಟಣದ ಜೋನಿಗೇರಿ ಬೀದಿಯಲ್ಲಿ ಅಲ್ತಾಫ್ ಪಾಷಾ ಮತ್ತು ಅವರ ಕುಟುಂದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಗುರುವಾರ ರಾತ್ರಿ ಸುಮಾರು 7ರ ಸಮಯದಲ್ಲಿ ಸಹೋದರಿಯರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಗ್ಯಾಸ್ ಗೀಸರ್ ಆನ್ ಮಾಡಿದಾಗ ವಿಷಾನಿಲ ಹೊರಗೆ ಬಂದಿದ್ದು, ಇದರಿಂದ ಉಸಿರಾಡಲು ತೊಂದರೆ ಉಂಟಾಗಿ ತಕ್ಷಣ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.
ಕೆಲ ಹೊತ್ತಾದರೂ ಸ್ನಾನದ ಕೋಣೆಯಿಂದ ಹೊರಗೆ ಬರದಿದ್ದಾಗ, ಕುಟುಂಬಸ್ಥರು ತೆರಳಿ ನೋಡಿದಾಗ ಇಬ್ಬರೂ ಕುಸಿದು ಬಿದ್ದಿದ್ದರು. ತಕ್ಷಣ ಇಬ್ಬರು ಸಹೋದರಿಯರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ನಿಶ್ಚಿತಾರ್ಥ ಆಗಿದ್ದ ಗುಲ್ಬಮ್ ತಾಜ್
ಅಲ್ತಾಫ್ ಪಾಷ ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಇಬ್ಬರಿಗೆ ಮದುವೆಯಾಗಿದೆ. ಮೃತ ಗುಲ್ಬಮ್ ತಾಜ್ಗೆ ನಿಶ್ಚಿತಾರ್ಥವಾಗಿತ್ತು. ಪಿರಿಯಾಪಟ್ಟಣಕ್ಕೆ ಹೊಸ ಬಾಡಿಗೆ ಮನೆಗೆ ಬಂದಿದ್ದಕ್ಕೆ ಪೂಜೆ ಹಮ್ಮಿಕೊಂಡಿದ್ದರು. ಈ ಪೂಜೆಗೆ ವರನ ಕಡೆಯವರು ಮನೆಯಲ್ಲಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಪಿರಿಯಾಪಟ್ಟಣದ ಶವಾಗಾರದಲ್ಲಿ ಇಬ್ಬರೂ ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಬೆಟ್ಟದಪುರದ ಗ್ರಾಮದಲ್ಲಿ ಶುಕ್ರವಾರ ಸಂಜೆ ವೇಳೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ.ಪ್ರಮೋದ್ ಕುಮಾರ್ ಮಾತನಾಡಿ, ಕಾರ್ಬನ್ ಮೋನಾಕ್ಸೆಡ್ ಸೇವನೆಯಿಂದ ಯುವತಿಯರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶವ ಪರೀಕ್ಷೆ ನಡೆಸಿ, ವರದಿಗೆ ಕಳುಹಿಸಲಾಗಿದೆ. ಗ್ಯಾಸ್ ಗೀಸರ್ ಬಳಸುವಾಗ ಜನರು ಎಚ್ಚರಿಕೆಯಿಂದ ಬಳಕೆ ಮಾಡಬೇಕು. ವೆಂಟಿಲೇಟರ್ ಇರುವ ಕಡೆ ಗ್ಯಾಸ್ ಗೀಸರ್ ಬಳಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.


