ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ರಸ್ತೆಯಲ್ಲಿ ಬಿದ್ದಿದ್ದ ನಾಡಬಾಂಬ್ ಮೇಲೆ ಹರಿದ ಪರಿಣಾಮ ಸ್ಫೋಟಗೊಂಡಿದ್ದು, ಇದರಿಂದ ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸಂಭವಿಸಿದೆ.
ಶಿಕಾರಿಪುರ ಕೆಎಸ್ಆರ್’ಟಿಸಿ ಡಿಪೋಗೆ ಸೇರಿದ ಕೆಎ 17 ಎಫ್ 1717 ನೊಂದಣಿಯ ಬಸ್, ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಶಿಕಾರಿಪುರ ಪಟ್ಟಣದಿಂದ ಮುಡುಬಸಿದ್ದಾಪುರ ಮಾರ್ಗದಲ್ಲಿ ಶಿಕಾರಿಪುರಕ್ಕೆ ಮರಳುತ್ತಿದ್ದಾಗ ಹಿರೇಕಲವತ್ತಿ ಗ್ರಾಮ ಈ ಘಟನೆ ನಡೆದಿದೆ.
ರಸ್ತೆಯಲ್ಲಿ ಬಿದ್ದಿದ್ದ ನಾಡಬಾಂಬ್ ಬಸ್ ಮುಂಭಾಗದ ಚಕ್ರದಡಿ ಸಿಲುಕಿ ಸಿಡಿದಿದೆ. ಬಸ್ ಹಿಂಭಾಗ ಆಗಮಿಸುತ್ತಿದ್ದ ಬೈಕ್ ಚಾಲಕ ಇದನ್ನು ಗಮನಿಸಿ, ಬಸ್ ಚಾಲಕನಿಗೆ ಮಾಹಿತಿ ನೀಡಿದ್ದಾನೆ.
ಘಟನೆಯಲ್ಲಿ ಬಸ್ ಗೆ ಯಾವುದೇ ಹಾನಿಯಾಗಿಲ್ಲ. ಹಾಗೆಯೇ ಬಸ್ ನಲ್ಲಿದ್ದ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ನಿಗೂಢ ಸ್ಫೋಟ
ಸ್ಫೋಟಗೊಂಡಿರುವ ನಾಡಬಾಂಬ್ ಕಡಿಮೆ ತೀವ್ರತೆಯದ್ದಾಗಿದೆ. ಇದರಿಂದ ಬಸ್ ಗೆ ಯಾವುದೇ ಹಾನಿಯಾಗಿಲ್ಲವೆಂದು ಎಂದು ತಿಳಿದುಬಂದಿದೆ. ಜಮೀನುಗಳಲ್ಲಿ ಕಾಡು ಹಂದಿಗಳ ಹಾವಳಿ ತಡೆಗೆ ಕೆಲವರು ಗುಪ್ತವಾಗಿ ನಾಡ ಬಾಂಬ್ ಬಳಕೆ ಮಾಡುತ್ತಾರೆ ಎಂಬ ಮಾಹಿತಿಯಿದೆ.
ಯಾರೋ ನಾಡ ಬಾಂಬ್ ಕೊಂಡೊಯ್ಯುವಾಗ ಆಕಸ್ಮಿಕವಾಗಿ ರಸ್ತೆಯಲ್ಲಿ ಬೀಳಿಸಿಕೊಂಡಿರಬಹುದು ಅಥವಾ ಯಾರಾದರೂ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ರಸ್ತೆಯಲ್ಲಿಟ್ಟಿದ್ದಾರೆಯೇ ಎಂಬುವುದು ಪೊಲೀಸರ ತನಿಖೆಯ ನಂತರವಷ್ಟೆ ತಿಳಿದುಬರಬೇಕಾಗಿದೆ.



