ಗದಗ: ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿ ಹೇಳಿಕೆ ತಪ್ಪು. ಇದು 100 ವರ್ಷಕ್ಕೂ ಹಳೆಯದು ಎಂದು ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿ ಅಲ್ಲ ಅಂತ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮುಲಿಮನಿ ಹೇಳಿಕೆ ನೀಡಿದ್ದರು. ಇದು ಬಾಯ್ತಪ್ಪಿನಿಂದ ಆದ ಹೇಳಿಕೆಯಾಗಿದೆ. ಸಿಕ್ಕಿರುವ ಒಡೆವೆಗಳು 100ಕ್ಕೂ ಹೆಚ್ಚು ಹಳೆಯದ್ದಾಗಿದೆ ಎಂದರು.
ನಿಧಿ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಯಾವ ಕಾಲದ್ದು, ಎಷ್ಟು ಹಳೆಯದ್ದು ಎನ್ನುವ ಮತ್ತಷ್ಟು ಮಾಹಿತಿ ಸಿಗಲಿದೆ. ತಪ್ಪು ಮಾಹಿತಿ ನೀಡಿದ ಪುರಾತತ್ವ ಇಲಾಖೆ ಅಧಿಕಾರಿಯ ಹೇಳಿಕೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಸಿಕ್ಕ ಚಿನ್ನವನ್ನು ರಿತ್ತಿ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸರ್ಕಾರದ ಜೊತೆ ಚರ್ಚೆ ನಡೆಸಿ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳವಾರ ರಾಜ್ಯ ಪುರಾತತ್ವ ಇಲಾಖೆಯ ಸ್ಮೀತಾ ರೆಡ್ಡಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ನಡೆಸುವ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಲಿವೆ ಎಂದು ಅವರು ಸ್ಪಷ್ಟಪಡಿಸಿದರು.
ಒಟ್ಟು 470 ಗ್ರಾಂ ಬಂಗಾರದ ಒಡವೆಗಳು ಸಿಕ್ಕಿವೆ. ಜಿಲ್ಲಾಡಳಿತದಿಂದ ಈಗಾಗಲೇ ಸ್ಥಳಕ್ಕೆ ತೆರಳಿ ಮಹಜರು ಮಾಡಲಾಗಿದೆ. ಚಿನ್ನದ ತೂಕದ ಬಗ್ಗೆ ಹಲವು ದ್ವಂದ್ವ ಹೇಳಿಕೆಗಳು ಕೇಳಿ ಬರುತ್ತಿವೆ. ಗಾಳಿ ಮಾತುಗಳು ಎಲ್ಲವೂ ಸುಳ್ಳು. ಪ್ರಜ್ವಲ್ ಎನ್ನುವ ಹುಡುಗ ಚಿನ್ನವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾನೆ. ಈಗಾಗಲೇ ಆ ಹುಡುಗನಿಗೆ ಸನ್ಮಾನ ಮಾಡಲಾಗಿದೆ. ಬಹುಮಾನ ನೀಡುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ಸರ್ಕಾರದ ಹಂತದಲ್ಲಿ ಚರ್ಚೆ ನಂತರ ಬಹುಮಾನ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮುಲಿಮನಿ ಮಾತನಾಡಿ, ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಸೈಟ್ ನೋಡಲು ಹೊಗಿದ್ದೆ. ಅಲ್ಲಿ ಸಿಕ್ಕ ಅವಶೇಷಗಳು 100 ವರ್ಷ ಮೆಲ್ಪಟ್ಟದ್ದಾಗಿವೆ ಅಂತ ಅಂದಾಜು ಮಾಡಲಾಯಿತು.
ಕರ್ನಾಟಕ ನಿಕ್ಷೇಪ ನಿಧಿಯ ಅಡಿಯಲ್ಲಿ ಭೂಮಿಯ ಆಳದಲ್ಲಿ 10 ರೂಪಾಯಿಗಿಂತ ಹೆಚ್ಚಿನ ದರದ ವಸ್ತುಗಳು ಏನೇ ಸಿಕ್ಕರೂ 1962 ಕಾಯ್ದೆ ಪ್ರಕಾರ ಸರ್ಕಾರಕ್ಕೆ ಸೇರಿದ್ದು ಎನ್ನುವ ಕಾನೂನು ಇದೆ ಎಂದರು.



