ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪುಬಂದು (ಆಗಸ್ಟ್ 1, 2024) 18 ತಿಂಗಳಾಗುತ್ತಿದೆ. ಪಕ್ಕದ ತೆಲಂಗಾಣ, ಆಂಧ್ರಪ್ರದೇಶ, ದೂರದ ಹರ್ಯಾಣ ಸರ್ಕಾರಗಳು ಆರೇ ತಿಂಗಳಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡಿ ನ್ಯಾಯ ಕೊಟ್ಟವು. ಆದರೆ ಕರ್ನಾಟಕದಲ್ಲಿ ಇನ್ನೂ ಒಳ ಮೀಸಲಾತಿ ಜಾರಿಯಾಗಿಲ್ಲ ಎಂದು ಬಿಜೆಪಿ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಗಮನ ಸೆಳೆದಿದೆ.
ನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಮಾದಿಗ ಸಮಾಜದ ಬೇಡಿಕೆ ಆಗಿರಲಿಲ್ಲ. ಈ ಹಿಂದೆ ತಯಾರಿಸಿದ ನ್ಯಾ ಸದಾಶಿವ ಆಯೋಗದ ವರದಿ ಮತ್ತು ಮಾಧುಸ್ವಾಮಿ ಸಮಿತಿ ವರದಿಯ ದತ್ತಾಂಶಗಳು ಸರ್ಕಾರದ ಬಳಿ ಇದ್ದವು. ಆದರೂ ಸರ್ಕಾರ ನ್ಯಾ ನಾಗಮೋಹನ ದಾಸ್ ಆಯೋಗ ರಚಿಸಿ ವರದಿ ಪಡೆಯಲು ನಿಶ್ಚಯಿಸಿತು. ಆರು ತಿಂಗಳು ಶ್ರಮವಹಿಸಿ, 110 ಕೋಟಿ ತೆರಿಗೆ ಹಣ ವ್ಯಯಿಸಿ ಆಯೋಗದಿಂದ ಶಿಫಾರಸುಗಳನ್ನು ಪಡೆಯಲಾಯಿತು ಎಂದು ನಿಯೋಗ ವಿವರಿಸಿದೆ.
ನ್ಯಾ. ನಾಗಮೋಹನ್ ದಾಸ್ ಶಿಫಾರಸು ಹೀಗಿದೆ
ಪ್ರವರ್ಗ 1 – 59 ಸಣ್ಣ ಅಲೆಮಾರಿ ಜಾತಿಗಳು : 1%
ಪ್ರವರ್ಗ 2 – ಮಾದಿಗ ಸಂಬಂಧಿತ ಜಾತಿಗಳು : 6%
ಪ್ರವರ್ಗ 3 – ಹೊಲೆಯ ಸಂಬಂಧಿತ ಜಾತಿಗಳು : 5 %
ಪ್ರವರ್ಗ 4 – ಭೋವಿ, ಬಂಜಾರ, ಕೊರಚ, ಕೊರಮ ಜಾತಿಗಳಿಗೆ : 4%
ಪ್ರವರ್ಗ 5 – ಮೂಲ ಜಾತಿ ಗುರುತಿಸಿಕೊಳ್ಳದೆ ಉಳಿದ AK, AD, AA: 1%
ಆದರೆ ಸರ್ಕಾರ ಈ ಶಿಫಾರಸ್ಸನ್ನು ಏಕೆ ಪರಿಗಣಿಸಲಿಲ್ಲ ? ಬದಲಾಗಿ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು 6 : 6 : 5 ರ ಹೊಸ ಸೂತ್ರ ರೂಪಿಸಿತು.
ಈ ಸೂತ್ರವನ್ನು ಯಾವ ಆಧಾರದಲ್ಲಿ ರೂಪಿಸಲಾಯಿತು? ಸರ್ಕಾರವಾಗಲಿ, ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ವಿವರಿಸಲಿಲ್ಲ. ಈ ಬಗ್ಗೆ ಸದನದಲ್ಲಿ ಮಸೂದೆ ಮಂಡಿಸಲಾಯಿತಾದರು ವಿಸ್ತೃತ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ರಾತ್ರಿ 7ಕ್ಕೆ ಮಸೂದೆಯನ್ನು ತಂದು ಸಂಖ್ಯಾಬಲದಿಂದ ತರಾತುರಿಯಲ್ಲಿ ಅಂಗೀಕಾರ ಪಡೆಯಲಾಯಿತು.
ಐತಿಹಾಸಿಕವಾದ ಒಳ ಮೀಸಲಾತಿಯನ್ನು ಜಾರಿ ಮಾಡುವ ಇಡೀ ಪ್ರಕ್ರಿಯೆಯಲ್ಲಿ ಸರ್ವಪಕ್ಷಗಳ ಪ್ರಮುಖರ ಸಭೆ ಮಾಡಲಿಲ್ಲ, ಸಲಹೆ ಕೇಳಲಿಲ್ಲ. ದಲಿತ ಸಂಘಟನೆಗಳ ಪ್ರಮುಖರ, ಹೋರಾಟಗಾರರ, ಕಾನೂನು ತಜ್ಞರ, ಬುದ್ಧಿಜೀವಿಗಳ ಸಭೆ ಕರೆಯಲಿಲ್ಲ. ಸದಾ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಾ ಅಹಂಕಾರದ ಮಾತುಗಳನ್ನು ಆಡುತ್ತಾ ದಿನದೂಡುವುದು ಸರ್ಕಾರದ ಹಳೇ ಚಾಳಿಯಾಗಿದೆ. ಒಳಮೀಸಲಾತಿಯೂ ಸರ್ಕಾರದ ಈ ಅಹಂಕಾರದಿಂದ ನೆಲಕಚ್ಚಿದೆ.
ನ್ಯಾ ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ, ನ್ಯಾ ನಾಗಮೋಹನ್ ದಾಸ್ ಆಯೋಗ – ಮೂರೂ ವರದಿಗಳು’ ಅಲೆಮಾರಿ, ಸಣ್ಣ ಜಾತಿಗಳ ಗುಂಪಿಗೆ ಪ್ರತ್ಯೇಕ ಪ್ರವರ್ಗದಲ್ಲಿ ಶೇ 1ರ ಮೀಸಲಾತಿ ‘ಕೊಟ್ಟಿದ್ದವು. ಆದರೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಒಳ ಮೀಸಲಾತಿಯನ್ನು ಜಾರಿ ಮಾಡಲು ಹೋಗಿ ಜಾರಿಬಿದ್ದು ನಗೆಪಾಟಿಲಾಗಿದೆ. ಅಲೆಮಾರಿಗಳು, ಸಣ್ಣ ಜಾತಿಗಳವರನ್ನು ಬೀದಿಪಾಲು ಮಾಡಿದೆ.
ಂಏ, ಂಆ, ಂಂ ಸಮಸ್ಯೆಗೂ ಪರಿಹಾರ ಒದಗಿಸಲಿಲ್ಲ. ಬಡ್ತಿ ಮೀಸಲಾತಿಯಲ್ಲಿ, SSಅP ಸೌಲಭ್ಯ ವಿತರಣೆಯ ವಿಷಯದಲ್ಲಿ ಒಳ ಮೀಸಲಾತಿ ಜಾರಿ ಮಾಡಲಿಲ್ಲ. ಬ್ಯಾಕ್ ಲಾಗ್ ನೇಮಕಾತಿಯಲ್ಲಿ ರೋಸ್ಟರ್ ರೂಪಿಸುವಲ್ಲಿಯೂ ಸರ್ಕಾರ ಸೋತಿದೆ. ಹೀಗಾಗಿ ಪರಿಶಿಷ್ಟರ ಎಲ್ಲ 101 ಜಾತಿಗಳಲ್ಲಿಯೂ ಅಸಮಾಧಾನ ಹೆಪ್ಪುಗಟ್ಟಿದೆ. ಪರಿಶಿಷ್ಟರ ಎಲ್ಲ ಗುಂಪುಗಳು ಬೀದಿಗಿಳಿದಿವೆ. ಅಲೆಮಾರಿ ಸಮುದಾಯಗಳ ಪ್ರಮುಖರೆದರು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ’ ಇದೊಂದು ರಾಜಕೀಯ ಪ್ರೇರಿತ ನಿರ್ಧಾರ. ಇದರಲ್ಲಿ ಸಾಮಾಜಿಕ ನ್ಯಾಯ ಇಲ್ಲ. ನ್ಯಾಯ ಬೇಕಿದ್ದರೆ ಕೋರ್ಟಿಗೆ ಹೋಗಿ’ ಎಂದು ಹೇಳಿದ್ದರು. ಇದಕ್ಕಿಂತ ದುರಂತ ಯಾವುದಿದೆ ?
ಈಗ ಒಳಮೀಸಲಾತಿಯ ವಿಷಯ ಕೋರ್ಟಿನ ಮೆಟ್ಟಿಲು ಹತ್ತಿದೆ. ನ್ಯಾಯಾಲಯದ ಮುಂದೆ ವಾದಿಸುವ ಸಿದ್ಧತೆ, ಮುತುವರ್ಜಿಗಳೂ ಕಾಣದಾಗಿದೆ. ಇಂತಹ ಬೇಜವಾಬ್ದಾರಿಯ ಸರ್ಕಾರವನ್ನು ಕರ್ನಾಟಕದ ಜನತೆ ಹಿಂದೆಂದು ನೋಡಿರಲಿಲ್ಲ.
ಕರ್ನಾಟಕದಲ್ಲಿ ಕಳೆದೆರೆಡು ವರ್ಷಗಳಿಂದ ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. 2.85 ಲಕ್ಷ ಹುದ್ದೆಗಳು ಖಾಲಿ ಬಿದ್ದಿದೆ. ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಿ ಯುವಜನತೆಯ ಆಶೋತ್ತರಗಳನ್ನು ಈಡೇರಿಸಬೇಕು. ಆದರೆ ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ದಿವಾಳಿಯಾಗಿರುವ ಸರ್ಕಾರ ಹೊಸ ನೇಮಕಾತಿಗಳಿಗೆ ಹಣಕಾಸು ಒದಗಿಸುವ ಸ್ಥಿತಿಯಲ್ಲಿ ಇಲ್ಲ. ಈ ಕಾರಣಕ್ಕಾಗಿ ಮೀಸಲಾತಿ ಗೊಂದಲವನ್ನು ಸೃಷ್ಟಿಸಿ ಸರ್ಕಾರ ಮುಖಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಎಲ್ಲರು ಅರ್ಥಮಾಡಿಕೊಳ್ಳಬೇಕಾಗಿದೆ.
ಈ ಎಲ್ಲ ವಿಷಯಗಳ ಬಗ್ಗೆ ಸ್ಪಷ್ಟನೆ ಕೇಳಿ ರಾಜ್ಯಪಾಲರಾದ ತಾವು ಸರ್ಕಾರಕ್ಕೆ ಪತ್ರಬರೆದಿದ್ದಿರಿ. ಸರ್ಕಾರದ ಉತ್ತರ ನಿಮಗೆ ಬಂದಿದೆ. ಅದನ್ನು ಅಂಗೀಕರಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.
ಸಾಮಾಜಿಕ ನ್ಯಾಯದ ಹಂಚಿಕೆಯ ವಿಷಯದಲ್ಲಿ ಅನುಭವಿ ರಾಜ್ಯಪಾಲರಾಗಿ ನಿಮ್ಮ ಗಟ್ಟಿ ನಿಲುವುಗಳನ್ನು ನಾವು ಅಭಿನಂದಿಸುತ್ತೇವೆ. ನೀವು ಎಲ್ಲ ನೂರೊಂದು ಜಾತಿಗಳ ಹಿತ ಕಾಯುವಿರೆಂಬ ಭರವಸೆ ನಮ್ಮದು ಎಂದು ನಿಯೋಗ ತಿಳಿಸಿದೆ.
ನಿಯೋಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಶಾಸಕ ದುರ್ಯೋಧನ ಐಹೊಳೆ, ಬಸವರಾಜ್ ಮತ್ತಿಮಡು, ನಿವೃತ್ತ ಐ.ಎ.ಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.



