ಬೆಂಗಳೂರು: ರಾಜ್ಯದಲ್ಲಿ 38 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಕೊರತೆ ಇದೆ. 14 ಸಾವಿರ ಟನ್ ಯೂರಿಯಾ ಕೊರತೆ ಇದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಸೋಮವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಎದುರಾಗಿದೆ. ಈ ಬಗ್ಗೆ ಕೇಂದ್ರದ ಜೊತೆ ಮಾತುಕತೆ ನಡೆಯುತ್ತಿದೆ ಎಂದರು.
ರಸಗೊಬ್ಬರ ಬಳಕೆ ಕಡಿಮೆ ಬಳಕೆ ಹಾಗೂ ಪರ್ಯಾಯ ಗೊಬ್ಬರ ಮೂಲಗಳ ಬಳಕೆಗೆ ಕರೆ ನೀಡಲಾಗುತ್ತಿದೆ. ಜೂನ್ನಲ್ಲಿ ಮುಂಗಾರು ಆರಂಭವಾಗಲಿದೆ. ರಸಗೊಬ್ಬರ ಪೂರೈಕೆ ಸಮಸ್ಯೆ ಬಗ್ಗೆ ಪರಿಣಾಮಕಾರಿ ವಿಜಿಲೆನ್ಸಿ ಮಾಡಲು ಸೂಚಿಸಲಾಗಿದೆ. ಫ್ರೂಟ್ ಐಡಿ ಮೂಲಕ ರೈತರಿಗೆ ಮಾತ್ರ ಗೊಬ್ಬರ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ಮುಂಗಾರು ಹಂಗಾಮಿಗೆ ಕೇಂದ್ರ ಸರ್ಕಾರದಿಂದ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ಗ್ರೇಡ್ನ ರಸಗೊಬ್ಬರಗಳನ್ನು ಹಂಚಿಕೆ ಮಾಡಲಾಗಿದೆ. (ಯೂರಿಯಾ- 11.10 ಲಕ್ಷ ಮೆ.ಟನ್, ಡಿ.ಎ.ಪಿ. 4 ಲಕ್ಷ ಮೆ.ಟನ್, ಎಂ.ಒ.ಪಿ 2.12 ಲಕ್ಷ ಮೆ.ಟನ್, ಕಾಂಪ್ಲೆಕ್ಸ್ 11.88 ಲಕ್ಷ ಮೆ.ಟನ್, ಎಸ್.ಎಸ್.ಪಿ 0.95 ಲಕ್ಷ ಮೆ.ಟನ್) ಸರಬರಾಜು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕಳೆದ ಸಾಲುಗಳಿಗೆ ಹೋಲಿಸಿದಲ್ಲಿ ಯೂರಿಯಾ ರಸಗೊಬ್ಬರದ ಆರಂಭಿಕ ಶಿಲ್ಕು ತುಂಬಾ ಕಡಿಮೆ ಇದೆ. (2023ರಲ್ಲಿ 3.91 ಲಕ್ಷ ಮೆ.ಟನ್, 2024ರಲ್ಲಿ 5.41 ಲಕ್ಷ ಮೆ.ಟನ್, 2025ರಲ್ಲಿ 3.46 ಲಕ್ಷ ಮೆ.ಟನ್) ಪಸಕ್ತ ಸಾಲಿನಲ್ಲಿ 2.80 ಲಕ್ಷ ಮೆ.ಟನ್ ಮಾತ್ರ ಇದೆ. ಜೊತೆಗೆ ಕೇಂದ್ರ ಸರ್ಕಾರದಿಂದ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಮತ್ತು ಡಿ.ಎ.ಪಿ. ರಸಗೊಬ್ಬರಗಳು ಸರಬರಾಜು ಆಗಿರುವುದಿಲ್ಲ. ಇದರಿಂದಾಗಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಕೊರತೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಏಪ್ರಿಲ್ ತಿಂಗಳ 4.02 ಲಕ್ಷ ಮೆ.ಟನ್ ವಿವಿಧ ಗ್ರೇಡ್ನ ರಸಗೊಬ್ಬರ ಬೇಡಿಕೆಗೆ ಕೇಂದ್ರ ಸರ್ಕಾರದಿಂದ 2.54 ಲಕ್ಷ ಮೆ.ಟನ್ ಮಾತ್ರ ಸರಬರಾಜು ಆಗಿದ್ದು, 1.48 ಲಕ್ಷ ಮೆಟನ್ ಕೊರತೆಯಾಗಿದೆ. ಡಿಎಪಿ 0.38 ಲಕ್ಷ ಮೆಟ್ರಿಕ್ ಟನ್ ಕೊರತೆಯಾಗಿದೆ. ಯೂರಿಯಾ 0.14 ಲಕ್ಷ ಮೆ.ಟನ್ ಕೊರತೆಯಾಗಿದೆ. ಮೇ ತಿಂಗಳಲ್ಲಿ ಇಲ್ಲಿಯವರೆಗೆ 4.54 ಲಕ್ಷ ಮೆ.ಟನ್ ವಿವಿಧ ಗ್ರೇಡ್ನ ರಸಗೊಬ್ಬರ ಬೇಡಿಕೆಗೆ ಕೇಂದ್ರ ಸರ್ಕಾರದಿಂದ 1.77 ಲಕ್ಷ ಮೆ.ಟನ್ ಮಾತ್ರ ಸರಬರಾಜಾಗಿದೆ. ಇನ್ನು 2.77 ಲಕ್ಷ ಟನ್ ಸರಬರಾಜು ಬಾಕಿ ಇದೆ. ಪ್ರಮುಖವಾಗಿ ಯೂರಿಯಾ 0.65 ಲಕ್ಷ ಮೆ.ಟನ್, ಡಿ.ಎ.ಪಿ-0.78 ಲಕ್ಷ ಮೆ.ಟನ್ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ, ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 8.57 ಲಕ್ಷ ಮೆ.ಟನ್ ವಿವಿಧ ಗ್ರೇಡ್ನ ರಸಗೊಬ್ಬರಗಳ ಬೇಡಿಕೆ ಇದ್ದು, 4.31 ಲಕ್ಷ ಮೆ.ಟನ್ ಸರಬರಾಜಾಗಿದ್ದು, 4.25 ಲಕ್ಷ ಮೆ.ಟನ್ ಬಾಕಿ ಇದೆ. ಪ್ರಮುಖವಾಗಿ ಯೂರಿಯಾ 0.79 ಲಕ್ಷ ಮೆ.ಟನ್, ಡಿ.ಎ.ಪಿ 1.17 ಲಕ್ಷ ಮೆ.ಟನ್ ಬಾಕಿ ಇದೆ ಎಂದು ಅಂಕಿ-ಅಂಶ ನೀಡಿದರು.
ಕೇಂದ್ರದಿಂದ 20 ಸಾವಿರ ಕೋಟಿ ಬಾಕಿ
40 ಲಕ್ಷ ಜನ ರೈತರಿಗೆ 470 ಕೋಟಿ ಸಹಾಯಧನ ನೀಡಲಾಗಿದೆ. ಕೇಂದ್ರದಿಂದ ನಮ್ಮ ಪಾಲಿನ 20 ಸಾವಿರ ಕೋಟಿ ಅನುದಾನ ಬರುವುದಕ್ಕೆ ಬಾಕಿ ಇದೆ. ಸುಪ್ರೀಂ ಕೋರ್ಟ್ ಆದೇಶದ ಮೇಲೆ ಇಲ್ಲಿಯವರೆಗೆ 3,454 ಕೋಟಿ ರೂ. ಮಾತ್ರ ಅನುದಾನ ನೀಡಿದೆ ಎಂದು ಅವರು ಆರೋಪಿಸಿದರು.



