ಧಾರವಾಡ: ತಾನು ಕುಳಿತ ಜಾಗದಲ್ಲೇ ಹೃದಯಾಘಾತವಾಗಿದ್ದರಿಂದ ರೈತನೋರ್ವ ಅಸುನೀಗಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಸಂಭವಿಸಿದೆ.
ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ಶಿವಯ್ಯ ಹಿರೇಮಠ (50) ಎಂಬ ರೈತ ಸಾವನ್ನಪ್ಪಿದವನು. ಈತ ಕೃಷಿ ಜಮೀನು ಹೊಂದಿದ್ದ. ಹೊಲದಲ್ಲಿ ಬೋರವೆಲ್ ಕೊರೆಯಿಸಲು ಬ್ಯಾಂಕ್ ಒಂದರಲ್ಲಿ ಸಾಲ ಸಹ ಪಡೆದಿದ್ದ. ಆದರೆ ಬೋರವೆಲ್ನಲ್ಲಿ ನೀರು ಬೀಳದೇ ಇದ್ದಿದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ನೋವಿನಲ್ಲಿದ್ದ ಎಂದು ಆತನ ಮನೆಯವರು ತಿಳಿಸಿದ್ದಾರೆ.
ಗರಗ ಗ್ರಾಮಕ್ಕೆ ಕಳೆನಾಶಕ ತರಲೆಂದು ಬಂದಿದ್ದ ಶಿವಯ್ಯ, ಗರಗ ಮಡಿವಾಳೇಶ್ವರ ಮಠದ ಕಮಾನಿನ ಬಳಿ ಬಂದು ಕುಳಿತುಕೊಂಡಿದ್ದ. ಆತ ಕುಳಿತ ಜಾಗದಲ್ಲೇ ಆತನಿಗೆ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.



