ನವದೆಹಲಿ: ದೆಹಲಿ ಹಾಗೂ ಮುಂಬೈ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ 9 ಉಗ್ರರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ದೆಹಲಿ ಪೊಲೀಸ್ ವಿಶೇಷ ಪಡೆ ಶನಿವಾರ ದಾಳಿ ನಡೆಸಿ ಬಂಧಿಸಿದ ಆರೋಪಿಗಳು ದೆಹಲಿ, ಪಂಜಾಬ್ ಮತ್ತು ಮುಂಬೈ ನಿವಾಸಿಗಳಾಗಿದ್ದು, ಕೆಲವರು ವಿದೇಶೀ ಪ್ರಜೆಗಳು ಸೇರಿದ್ದಾರೆ.
ಪಾಕಿಸ್ತಾನದ ಐಎಸ್ ಐ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಂಟು ಹೊಂದಿದ್ದರು ಎಂದು ತಿಳಿದು ಬಂದಿದ್ದು, ಬಂಧಿತರಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರು ದೇಶದಲ್ಲಿರುವ ಅಣುಸ್ಥಾವರ, ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ ಮುಂತಾದ ಸ್ಥಳಗಳ ಮೇಲೆ ದಾಳಿ ನಡೆಸಲು ಪಟ್ಟಿ ಸಿದ್ಧಪಡಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಬಂಧಿತರ ವಿಚಾರಣೆ ನಡೆಸುತ್ತಿದ್ದು, ಉಗ್ರರು ಹೇಗೆ ದೇಶದೊಳಗೆ ನುಸುಳಿದರು? ಹಾಗೂ ಅವರು ಸ್ಥಳೀಯರನ್ನು ಹೇಗೆ ಸಂಪರ್ಕಿಸಿದರು ಎಂಬುದು ಸೇರಿದಂತೆ ಹಲವು ವಿಷಯಗಳ ಕುರಿತು ಬಾಯಿಬಿಡಿಸುವ ಪ್ರಯತ್ನ ಮಾಡಲಿದ್ದಾರೆ.
9 ಉಗ್ರರ ಬಂಧನ ಬೆನ್ನಲ್ಲೇ ಗುಪ್ತಚರ ಇಲಾಖೆಗೆ ಹೈ ಅಲರ್ಟ್ ಇರುವಂತೆ ಸೂಚಿಸಲಾಗಿದೆ.



