ಕಾಡಾನೆ ದಾಳಿಗೆ ಸಿಲುಕಿ ನಿವೃತ್ತ ಐಜಿಪಿ ಪತ್ನಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಬಳಿಯ ಕೊಣ್ಣನಕಟ್ಟೆ ಗ್ರಾಮದಲ್ಲಿ ನಡೆದಿದೆ.
ತಿತಿಮತಿ ಬಳಿಯ ಕೋಣನಕಟ್ಟೆಯಲ್ಲಿ ಕಾಫಿ ತೋಟ ವೀಕ್ಷಿಸಲು ಹೋಗಿದ್ದಾಗ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ಮೃತಪಟ್ಟಿದ್ದಾರೆ.
ಸಂಧ್ಯಾ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ವಾಯುವಿಹಾರಕ್ಕೆ ತೆರಳಿದ್ದರು. ಹಾಗೇ ತೋಟದ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನ ಮೇಲ್ವಿಚಾರಣೆ ಮಾಡಿಕೊಂಡು ವಾಪಸ್ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಎರಗಿದ ಕಾಡಾನೆ ಸಂಧ್ಯಾ ಮೇಲೆ ದಾಳಿ ನಡೆಸಿದೆ.
ಕಾಡಾನೆ ಸಂಧ್ಯಾ ಮೇಲೆ ಅಲ್ಲದೆ ಇಬ್ಬರು ಕಾಫಿ ತೋಟದ ಕಾರ್ಮಿಕರ ಮೇಲೂ ದಾಳಿ ಮಾಡಲು ಮುಂದಾಗಿದೆ. ಇವರು ದಾಳಿಯಿಂದ ಓಡಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪಲು ಲೋಪಾಮುದ್ರಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಸಂಧ್ಯಾ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಾಣಾಪಾಯದಿಂದ ಪಾರಾದ ಗಾಯಾಳು ಕಾರ್ಮಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಎರಡು ಸಾಕಾನೆಗಳ ಕಾದಾಟದ ವೇಳೆ ಅನಿರೀಕ್ಷಿತವಾಗಿ ಆಯತಪ್ಪಿ ಬಿದ್ದು ಆನೆಯ ಕೆಳಗೆ ಸಿಲುಕಿ ತಮಿಳುನಾಡಿನ ಜಾನ್ನಿಸಿ (33) ಎಂಬ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ಸಂಭವಿಸಿತ್ತು. ಮಹಿಳೆಯ ಪತಿ ಹಾಗೂ ಮಗು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಆನೆಗಳ ಸ್ನಾನ ಮಾಡಿಸುವಾಗ ನದಿಯ ಬಳಿ ನಿಂತು ನೋಡುತ್ತಿದ್ದಾಗ ಈ ಘಟನೆ ನಡೆದಿತ್ತು.
ಮೃತ ಜಾನ್ನಿಸಿ ಪತಿ ಹಾಗೂ ಮಗಳ ಜೊತೆ ಎರಡು ದಿನಗಳ ಕೊಡಗು ಪ್ರವಾಸಕ್ಕೆ ಬಂದಿದ್ದರು. ಘಟನೆಯ ವಿಡಿಯೋಗಳನ್ನು ಸ್ಥಳದಲ್ಲಿದ್ದವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗಿದ್ದವು. ಈ ಸಂಬಂಧ ಕೊಡಗಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



