ನವದೆಹಲಿ: ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಭಾರತದ ಭೂ ಸೇನಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದ್ದು, ಜನರಲ್ ಉಪೇಂದ್ರ ದ್ವಿವೇದಿ ಅವರ ಸ್ಥಾನದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕೇಂದ್ರ ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಜೂನ್ 30, 2026 ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಜನರಲ್ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ಧೀರಜ್ ಸೇಠ್ ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಮತ್ತು ಆರ್ಮರ್ಡ್ ಕಾರ್ಪ್ಸ್ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲೆಫ್ಟಿನೆಂಟ್ ಜನರಲ್ ಸೇಠ್ ಸುಮಾರು ನಾಲ್ಕು ದಶಕಗಳ ವಿಶಿಷ್ಟ ಸೇವೆಗಳ ಅನುಭವ ಹೊಂದಿದ್ದಾರೆ. ಇದು ವೈವಿಧ್ಯಮಯ ಕಾರ್ಯಾಚರಣೆ ಮತ್ತು ಸಾಂಸ್ಥಿಕ ಕ್ಷೇತ್ರಗಳಲ್ಲಿ ವ್ಯಾಪಕವಾದ ಕಮಾಂಡ್, ಸಿಬ್ಬಂದಿ ಮತ್ತು ಕಾರ್ಯತಂತ್ರದ ನೇಮಕಾತಿಗಳಿಂದ ಗುರುತಿಸಲ್ಪಟ್ಟಿದೆ.
ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 1986 ರಲ್ಲಿ ಆರ್ಮರ್ಡ್ ಕಾರ್ಪ್ಸ್ಗೆ ನಿಯೋಜನೆಗೊಂಡಿದ್ದರು ಎಂದು ಸಚಿವಾಲಯ ತಿಳಿಸಿದೆ. ಲೆಫ್ಟಿನೆಂಟ್ ಜನರಲ್ ಆಗಿ, ಅವರು ಭಾರತೀಯ ಸೇನೆಯ ಪ್ರಮುಖ ಸ್ಟ್ರೈಕ್ ರಚನೆಗಳಲ್ಲಿ ಒಂದಾದ ಸುದರ್ಶನ ಚಕ್ರ ಕಾರ್ಪ್ಸ್ಗೆ ಕಮಾಂಡ್ ಮಾಡಿದ್ದರು. ನಂತರ ಅವರು ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಿಲಿಟರಿ ಕಾರ್ಯಾಚರಣೆಗಳು ಮತ್ತು ವಿಧ್ಯುಕ್ತ ಜವಾಬ್ದಾರಿಗಳನ್ನು ಮೇಲ್ವಿಚಾರಣೆ ಮಾಡಿದ ಅನುಭವ ಹೊಂದಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸೇನಾ ಕಮಾಂಡರ್ ಆಗಿ ಬಡ್ತಿ ಪಡೆದ ನಂತರ, ಅಧಿಕಾರಿ ನೈಋತ್ಯ ಕಮಾಂಡ್ ಮತ್ತು ದಕ್ಷಿಣ ಕಮಾಂಡ್ಗಳನ್ನು ಮುನ್ನಡೆಸಿದ್ದರು. ಎರಡು ಕಾರ್ಯಾಚರಣಾ ಸೇನಾ ಕಮಾಂಡ್ಗಳಿಗೆ ಕಮಾಂಡ್ ಮಾಡುವ ಮತ್ತು ಯುದ್ಧ ಭೂಮಿಗಳಲ್ಲಿ ನಿರ್ಣಾಯಕ ಕಾರ್ಯತಂತ್ರದ ಮೇಲ್ವಿಚಾರಣೆಯನ್ನು ಒದಗಿಸುವ ಅಪರೂಪದ ಅನುಭವವನ್ನು ಪಡೆದಕೊಂಡಿದ್ದಾರೆ. ಕಾರ್ಯಾಚರಣೆ ಯೋಜನೆ, ಪಡೆ ನಿರ್ವಹಣೆ ಮತ್ತು ಸಾಮರ್ಥ್ಯ ಅಭಿವೃದ್ಧಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದ ಅನುಭವವೂ ಇದೆ.
ಲೆಫ್ಟಿನೆಂಟ್ ಜನರಲ್ ಹೈಯರ್ ಕಮಾಂಡ್ ಕೋರ್ಸ್ ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಪದವೀಧರರಾಗಿದ್ದಾರೆ. ಪ್ಯಾರಿಸ್ನಲ್ಲಿ ಪ್ರತಿಷ್ಠಿತ ಕಮಾಂಡ್ ಮತ್ತು ಸ್ಟಾಫ್ ಕೋರ್ಸ್ಗೆ ಸಹ ಹಾಜರಾಗಿದ್ದರು. ಇದು ಅವರ ವಿಶಾಲ ಕಾರ್ಯತಂತ್ರದ ದೃಷ್ಟಿಕೋನ ಮತ್ತು ಸಮಕಾಲೀನ ಮಿಲಿಟರಿ ವ್ಯವಹಾರಗಳ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.



