ಬಾಗಲಕೋಟೆ: ಪರಿಹಾರ ಹಾಗೂ ನಿವೇಶನ ಹಂಚಿಕೆ ವಿಳಂಬಕ್ಕೆ ಸಂಬಂಧಿಸಿದಂತೆ ರೈತನೋರ್ವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗೆ ಚಪ್ಪಲಿ ಏಟು ನೀಡಿರುವ ಘಟನೆ ಶನಿವಾರ ನಡೆದಿದೆ.
ಬಿಟಿಡಿಎ ಬೆರಳಚ್ಚುಗಾರ ನೀಲಕಂಠ ಅಂಕದ ಅವರ ಮೇಲೆ ರೈತ ಬಸಪ್ಪ ದೊಡ್ಡಮನಿ ಹಲ್ಲೆ ನಡೆಸಿದ್ದು, ನೀಲಕಂಠ ಅಂಕದ ಅವರು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ಬಿಟಿಡಿಯಲ್ಲಿ ಹಕ್ಕುಪತ್ರ ವಿತರಣೆ ಹಾಗೂ ಇ-ಖಾತಾಗಳನ್ನು ವಿತರಿಸಲಾಗುತ್ತಿತ್ತು. ಈ ವೇಳೆ ಬಿಟಿಡಿಎಗೆ ಆಗಮಿಸಿರುವ ರೈತ ಬಸಪ್ಪ ದೊಡ್ಡಮನಿ ಏಕಾಏಕಿ ನೀಲಕಂಠ ಅಂಕದ ಮೇಲೆ ದಾಳಿ ನಡೆಸಿದ್ದಾನೆ. ಪದೇ,ಪದೆ ನಮ್ಮನ್ನು ಅಲೆದಾಡಿಸುತ್ತೀರಿ. ಒಂದಲ್ಲ, ಎರಡಲ್ಲ ನಾಲ್ಕು ಎಕರೆ ಜಾಗೆ ಎಂದು ಬಸಪ್ಪ ಹೇಳುತ್ತಲೇ ನೀಲಕಂಠ ಅಂಕದ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಘಟನೆ ವಿವರ:
ಎರಡನೇ ಶನಿವಾರವಾಗಿರುವುದರಿಂದ ಸರ್ಕಾರಿ ಕಚೇರಿಗಳಿಗೆ ರಜೆಯಿತ್ತು. ಆದರೆ ಸಂತ್ರಸ್ತರಿಗೆ ಹಕ್ಕು ಪತ್ರ ಹಾಗೂ ಇ-ಖಾತಾ ಉತಾರ ವಿತರಣೆ ಕಾರ್ಯಕ್ರಮನ್ನು ಹಮ್ಮಿಕೊಂಡಿರುವುದರಿAದ ಬಿಟಿಡಿಎ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು. ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕಾರ್ಯಕ್ರಮ ಆರಂಭಗೊಂಡಿರಲಿಲ್ಲ. ನೀಲಕಂಠ ಅಂಕದ ತಮ್ಮ ಸ್ಥಾನದಲ್ಲಿ ಕೆಲಸಕ್ಕೆ ಕುಳಿತಿದ್ದರು. ಈ ವೇಳೆ ಬಸಪ್ಪ ದೊಡ್ಡಮನಿ ಸ್ಥಳಕ್ಕೆ ಆಗಮಿಸಿದ್ದು, ಏಕಾಏಕಿ ಅಂಕದ ಅವರ ಕಾಲರ್ ಹಿಡಿದು ಎಳೆದಾಡಿದಲ್ಲದೇ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಕರಣದ ಹಿನ್ನೆಲೆ:
ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಸಪ್ಪ ದೊಡ್ಡಮನಿ ಅವರ ಜಮೀನು ಸ್ವಾಧೀನಗೊಂಡಿದೆ. ಅದಕ್ಕೆ ಸಂಬಂಧಿಸಿದಂತೆ ಬಿಟಿಡಿಎದಿಂದ ಪರಿಹಾರ ವಿತರಣೆ ಆಗಬೇಕಿದೆ. ಆದರೆ ಅವರ ಜಮೀನಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಪರಿಹಾರದ ಚೆಕನ್ನು ಬಿಟಿಡಿಎ ನ್ಯಾಯಾಲಯಕ್ಕೆ ನೀಡಿದೆ. ಹೀಗಾಗಿ ಪರಿಹಾರ ವಿತರಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.
ಬಸಪ್ಪ ಅವರ ಜಮೀನಿನ ವಿಚಾರ ನೋಡಿಕೊಳ್ಳುವ ಕೇಸ್ ವರ್ಕರ್ ಬೇರೆಯಿದ್ದು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹಿಂದೆ ಇಂಜನಿಯರ್ಗಳು ಕೆಲಸಕ್ಕೆ ತೆರಳಿದಾಗಲೂ ಇದೇ ಬಸಪ್ಪ ಇಂಥದೇ ವರ್ತನೆ ತೋರಿದ್ದು, ಇಂದು ಏಕಾಏಕಿ ಬಂದು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ನಾವು ನೌಕರರು. ದುಡಿಯಲು ಬಂದಿರುತ್ತೇವೆ. ನಮ್ಮ ಜೀವಕ್ಕೆ ರಕ್ಷಣೆ ಇಲ್ಲದಂತೆ ಆಗಿದೆ ಎಂದು ಮಾಧ್ಯಮಗಳ ಎದುರು ನೀಲಕಂಠ ಅಂಕದ ಹೇಳಿದ್ದಾರೆ.



