ಬೆಂಗಳೂರು: ಜೂನ್ ತಿಂಗಳ ಎರಡನೇ ವಾರದ ಮುಕ್ತಾಯಕ್ಕೆ ಕರ್ನಾಟಕದ 19 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ.
ಈಗಾಗಲೇ ಮುಂಗಾರು ರಾಜ್ಯವನ್ನು ಪ್ರವೇಶಿಸಿದ್ದರೂ ಕರ್ನಾಟಕದ ಹೆಚ್ಚಿನ ಭಾಗದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಜೂನ್ 1ರಿಂದ ಜೂನ್ 14ರವರೆಗಿನ ಮಳೆಯ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಮಳೆ ಪ್ರಮಾಣ ವಾಡಿಕೆಗಿಂತ ಶೇ 100ಕ್ಕೂ ಅಧಿಕ ಆಗಿರುವುದು ವಿಶೇಷ. ದಾವಣಗೆರೆ, ಮೈಸೂರು, ರಾಮನಗರ, ಹಾವೇರಿ ಸಹಿತ ಕೆಲವು ಜಿಲ್ಲೆಗಳಲ್ಲಿ ಕೊರತೆ ಪ್ರಮಾಣ ಶೇ 50ಕ್ಕೂ ಅಧಿಕವಾಗಿದೆ. ಮಳೆ ನಿರೀಕ್ಷಿಸುವ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲೂ ಕೊರತೆ ಕಂಡು ಬಂದಿದೆ.
ಎರಡು ವಾರದ ಅವಧಿಯಲ್ಲಿ ಕರ್ನಾಟದಲ್ಲಿ 88.9 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೂ ಈವರೆಗೂ 77.8 ಮಿ.ಮೀ ನಷ್ಟು ಮಳೆಯಾಗಿದ್ದು, ಶೇ. 17ರಷ್ಟು ಕೊರತೆ ಎದುರಾಗಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆ ಮಳೆ 376.9 ಮಿ.ಮೀ ಬದಲು 257.1 ಮಿ.ಮೀ ಮಳೆಯಾಗಿದ್ದು, ಕೊರತೆ ಪ್ರಮಾಣ ಶೇ 32. ಉಡುಪಿ ಜಿಲ್ಲೆಯಲ್ಲಿ 455.8 ಮಿ.ಮೀ ವಾಡಿಕೆಗಿಂತ 313.1 ಮಿ.ಮೀ ಮಳೆಯಾಗಿದ್ದು ಶೇ 31ರಷ್ಟು ಕೊರತೆ ಎದುರಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆ 280.4 ಮಿ.ಮೀ ಬದಲು 197.7 ಮಿ.ಮೀ ಮಳೆಯಾಗಿದ್ದು, ಕೊರತೆ ಪ್ರಮಾಣ ಶೇ 30, ಈ ಮೂರು ಜಿಲ್ಲೆ ಕೊರತೆ ಪ್ರಮಾಣವು ಶೇ 31ರಷ್ಟಿದೆ.
ಉತ್ತರ ಒಳನಾಡಿನ ಬಾಗಲಕೋಟೆ ಜಿಲ್ಲೆಯಲ್ಲಿ ವಾಡಿಕೆ 51.2 ಮಿ.ಮೀಗಿಂತ 73.2 ಮಿ.ಮೀನಷ್ಟು ಮಳೆಯಾಗಿದ್ದು, ಶೇ 43 ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆ 65.7 ಮಿ.ಮೀ ಬದಲು 89.5 ರಷ್ಟು ಮಿ.ಮೀ ಅಂದರೆ ಶೇ 36ರಷ್ಟು ಹೆಚ್ಚು ಮಳೆಯಾಗಿದೆ.
ಮಳೆ ಕೊರತೆ ವಿವರ
ಕೋಲಾರ ಜಿಲ್ಲೆಯಲ್ಲಿ 48.3 ಮಿ.ಮೀ ಬದಲು 34.9 ಮಿ.ಮೀ ಶೇ 28 ಕೊರತೆ, ಮಂಡ್ಯ ಜಿಲ್ಲೆಯಲ್ಲಿ 39.8 ಮಿ.ಮೀ ಬದಲು 24.9 ಮಿ,ಮೀ ಶೇ 38 ಕೊರತೆ, ಮೈಸೂರು ಜಿಲ್ಲೆಯಲ್ಲಿ ವಾಡಿಕೆ 44.9 ಮಿ.ಮೀ ಬದಲು 20 ಮಿ.ಮೀ ಶೇ 55, ರಾಮನಗರ ಜಿಲ್ಲೆಯಲ್ಲಿ 50.8 ಮಿ.ಮೀ ಬದಲು ಬರೀ 11 ಮಿ.ಮೀ ನಿಂದ ಶೇ 78 ಕೊರತೆ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 137.6 ಮಿ.ಮೀ ಮಳೆ ಜಾಗದಲ್ಲಿ 70.7 ಮಿ.ಮೀ ಮಳೆಯಾಗಿದ್ದು ಕೊರತೆ ಪ್ರಮಾಣವೇ ಶೇ 49ರಷ್ಟಿದೆ. ತುಮಕೂರು ಜಿಲ್ಲೆಯಲ್ಲಿ 44.6 ಮಿ.ಮೀ ವಾಡಿಕೆ ಮಳೆ ಜಾಗದಲ್ಲಿ 43.2 ಮಿ.ಮೀ ಮಳೆಯಾಗಿ ಶೇ 2ರಷ್ಟು, ವಿಜಯನಗರ ಜಿಲ್ಲೆಯಲ್ಲಿ 46 ಮಿ.ಮೀ ಬದಲು ಬರೀ 10.1 ಮಿ.ಮೀ ಮಳೆಯಾಗಿ ಕೊರತೆ ಪ್ರಮಾಣ ಶೇ 78ರಷ್ಟು ಕಂಡು ಬಂದಿದೆ.



