ಬೆಂಗಳೂರು: ಮಕ್ಕಳ ಸುರಕ್ಷತೆ ಲೆಕ್ಕಿಸದೆ, 2-3 ವರ್ಷದ ಕಂದಮ್ಮಗಳ ಮೇಲೆ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದ ಕ್ಯಾಪ್ಜೆಮಿನಿ ಕಂಪನಿಯ ಡೇಕೇರ್ ಗೆ ಬೀಗ ಹಾಕಲಾಗಿದೆ.
ಡೇ ಕೇರ್ನಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ, ವಿಜಯಲಕ್ಷ್ಮಿ, ಭವಾನಿ, ಸಿಂಧು ಮತ್ತು ಬಿಂದುರನ್ನು ಹೆಚ್ ಎಎಲ್ ಪೊಲೀಸರು ಬಂಧಿಸಿದ್ದಾರೆ. ದೌರ್ಜನ್ಯ ಹಿಂದೆಯೂ ನಡೆಯುತ್ತಿದ್ದ ಬಗ್ಗೆ ದೂರು ಕೊಟ್ಟಾಗ, ಏನೂ ಕ್ರಮ ಕೈಗೊಳ್ಳದ ಸಂಸ್ಥೆ ಆ ಸಿಬ್ಬಂದಿಯನ್ನೇ ಕೆಲಸದಿಂದ ವಜಾ ಮಾಡಿದ್ದ ಘಟನೆ ಈಗ ಬಯಲಾಗಿದೆ.
ಅಳುತ್ತಿದ್ದ, ಹಠ ಹಿಡಿಯುತ್ತಿದ್ದ ಮಕ್ಕಳನ್ನು ಬೆದರಿಸಲು ಡೇಕೇರ್ ಸಿಬ್ಬಂದಿಗಳು, ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಒಳಗೆ ಮಕ್ಕಳನ್ನು ಕೂರಿಸುವುದು, ಬಾಯೊಳಗೆ ವೆಸ್ಟರ್ನ್ ಟಾಯ್ಲೆಟನ್ನ ಜೆಟ್ ಸ್ಪೇ ಹಿಡಿಯುವುದು, ಬಾತ್ರೂಂನಲ್ಲಿ ಹಾಕಿ ಬಾಗಿಲು ಹಾಕುವುದು ಸೇರಿದಂತೆ ನಾನಾ ಕಿರುಕುಳ ಕೊಡಲಾಗುತ್ತಿದ್ದು. ಇದು ಎಚ್ಎಲ್ ಕ್ಯಾಂಪಸ್ನ ಕ್ಯಾಪ್ಜೆಮಿನಿ ಕಂಪನಿಯ ಡೇಕೇರ್ನಲ್ಲಿ ನಡೆದ ಘಟನೆಯಾಗಿದ್ದು ತಾತ್ಕಾಲಿಕವಾಗಿ ಶಿಶವಿಹಾರವನ್ನು ಬಂದ್ ಮಾಡಲಾಗಿದೆ.
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ದೂರು ನೀಡಿದ್ದ ಉದ್ಯೋಗಿಯನ್ನು ಕಳೆದ ತಿಂಗಳು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಮಕ್ಕಳ ಮೇಲೆ ದೌರ್ಜನ್ಯ ಆದಾಗ ಮೇಲ್ವಿಚಾರಕರ ಗಮನಕ್ಕೆ ತಂದರೂ ಏನೂ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಮೊದಲೇ ಹೇಳಿದ್ದ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಬಳಿಕ ಇದೇ ಡೇಕೇರ್ ನಲ್ಲಿ ಕೆಲಸಮಾಡುತ್ತಿದ್ದ ಮತ್ತೊಬ್ಬರು ಸ್ನೇಹಿತ ಸಿಬ್ಬಂದಿಯ ಮೂಲಕ ಈ ವಿಡಿಯೋ ಮಾಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಈ ಘಟನೆ ಬಹಳ ಗಂಭೀರವಾದುದು ಎಂದು
ಎಚ್ಚರಿಕೆ ನೀಡಿದ್ದಾರೆ. ನಗರದ ಇತರ ಡೇ ಕೇರ್ ಸೆಂಟರ್ ಗಳೂ ನಿಯಮ ಪಾಲಿಸುತ್ತಿವೆಯೇ ಎಂದು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಬುಧವಾರದಂದು ಈ ಪ್ರಕರಣ ಬೆಳಕಿಗೆ ಬಂದಿದ್ದು, ಡೇ ಕೇರ್ ಸಿಬ್ಬಂದಿಗಳು ಪುಟ್ಟ ಮಕ್ಕಳ ಮೇಲೆ ಕ್ರೂರವಾಗಿ ದೌರ್ಜನ್ಯ ಎಸಗುತ್ತಿರುವ ಆಘಾತಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪೋಷಕರಲ್ಲಿ ತೀವ್ರ ಆತಂಕ ಮೂಡಿದ್ದು, ಎಚ್ಎಎಲ್ ಪೊಲೀಸರು ಘಟನೆ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ.
ಸಂಸ್ಥೆಯ ಪ್ರತಿಕ್ರಿಯೆ:
ನಮ್ಮ ಉದ್ಯೋಗಿಗಳು ಹಾಗೂ ಅವರ ಕುಟುಂಬದವರ ಆರೋಗ್ಯ-ಸುರಕ್ಷತೆಗೆಮೊದಲ ಆದ್ಯತೆ ಕೊಡುತ್ತೇವೆ. ಘಟನೆಯ ಸತ್ಯಾಸತ್ಯತೆ ಹೊರತರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕಾರ ಕೊಡುತ್ತೇವೆ. ಮುನ್ನೆಚ್ಚರಿಕಾ ಕ್ರಮವಾಗಿ, ಬೆಂಗಳೂರು ಕ್ಯಾಂಪಸ್ನ ಡೇಕೇರ್ ಸೌಲಭ್ಯವನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ ಎಂದು ಹೇಳಿದೆ.
ಡೇ ಕೇರ್ನಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ, ವಿಜಯಲಕ್ಷ್ಮಿ, ಭವಾನಿ, ಸಿಂಧು ಮತ್ತು ಬಿಂದು ಎಂಬ ಐದು ಜನ ದಾದಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಬಾಲನ್ಯಾಯ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) ಸೆಕ್ಷನ್ 351 (ಅಪರಾಧದ ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ತಿಲಕೇಶ್ ಕುಮಾರ್ ಅವರಿಗೆ ವಾಟ್ಸಾಪ್ ಮೂಲಕ ಈ ವಿಡಿಯೋಗಳು ಬಂದಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಜೂನ್ 29 ರಂದೇ. ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಿದ್ದ ಸಿಬ್ಬಂದಿಯೊಬ್ಬರ ಸ್ನೇಹಿತ ಈ ವಿಡಿಯೋಗಳನ್ನು ಮಾಡಿದ್ದಾನೆ ಎನ್ನಲಾಗಿದೆ.



