ಚಿಕ್ಕಬಳ್ಳಾಪುರ: ರಾಮಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂಪಾಯಿ ಲೂಟಿ ನಡೆದಿದೆ ಎಂಬ ಸುದ್ದಿಗಳು ಬರುತ್ತಿರುವು ಆತಂಕ ಉಂಟು ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಹಾಗೂ ಶ್ರೀರಾಮನ ಹೆಸರನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡು ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ದೂರಿದರು.
ಅಯೋಧ್ಯೆಯಲ್ಲಿ ನಡೆದಿರುವ ರೀತಿಯ ಘಟನೆಗಳು ಬದರಿನಾಥ, ಕೇದಾರನಾಥ ಹಾಗೂ ಅಮರನಾಥ ದೇವಾಲಯದಲ್ಲೂ ನಡೆದಿರುವ ಆರೋಪ ಕೇಳಿ ಬರುತ್ತಿವೆ ಎಂದರು.
ಅಯೋಧ್ಯೆಯಲ್ಲಿ ಬಡವರು, ದಲಿತರು ಅಥವಾ ರೈತರು ಹಣ ಲೂಟಿ ಮಾಡಿಲ್ಲ. ಪ್ರಭಾವಿ ವರ್ಗದವರು ಹಾಗೂ ಆರ್ಎಸ್ಎಸ್, ಬಿಜೆಪಿ ಪರವಾಗಿರುವವರು ಹಣ ಲೂಟಿ ಮಾಡಿದ್ದಾರೆ. ಪ್ರತಿದಿನ ದೇವರ ಹೆಸರು ಜಪಿಸುವವರು, ಅದೇ ದೇವರ ಹೆಸರಿನಲ್ಲಿ ಲೂಟಿ ಮಾಡುತ್ತೀರಾ? ಎಂದು ಪ್ರಶ್ನಿಸಿದರು.



