ಹಣ ಕೊಡಲು ನಿರಾಕರಿಸಿದ ಹೆತ್ತತಾಯಿಯನ್ನು ಗೋಡೆಗೆ ಗುದ್ದಿ ಕಲ್ಲಿನಿಂದ ಜಜ್ಜಿ ಪಾಪಿ ಮಗ ಕೊಲೆಗೈದ ಘಟನೆ ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ಮಸ್ಕಿ ತಾಲೂಕಿನ ಜಕ್ಕೇರುಮಡು ತಾಂಡ ಗ್ರಾಮದಲ್ಲಿ ಸೋಮವಾರ ಸಂಜೆ ಚಂದವ್ವ (58) ಅವರನ್ನು ಪುತ್ರ ಕುಮಾರ ಕೊಲೆ ಮಾಡಿದ್ದಾನೆ.
ಬೆಂಗಳೂರಿನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ಕುಮಾರ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಿದ್ದ. ಊರಿಗೆ ಬಂದಾಗಲೆಲ್ಲ ತನ್ನ ತಾಯಿ ಚಂದವ್ವನಿಗೆ ಹಣ ಕೊಡುವಂತೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ.
ಜ.25ರಂದು ಬೆಳಗ್ಗೆ ಬೆಂಗಳೂರಿನಿಂದ ಜಕ್ಕೇರುಮಡು ತಾಂಡಕ್ಕೆ ಬಂದಿದ್ದ ಕುಮಾರ ತಾಯಿಯೊಂದಿಗೆ ಜಗಳ ತೆಗೆದು ಹೊಲ ಮಾರಾಟ ಮಾಡಿ ಇಲ್ಲವೇ ಅಡವಿಟ್ಟು 2 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದ.
ಚಂದವ್ವ ಕಿರಿಯ ಪುತ್ರ ಸಂತೋಷನ ಮದುವೆ ಮಾಡಬೇಕು, ನಮ್ಮ ಹತ್ತಿರ ಹಣವಿಲ್ಲ, ಹೊಲ ಮಾರಿದರೆ ಮದುವೆಗೆ ಹಣ ಎಲ್ಲಿಂದ ತರೋದು? ನೀನು ನಿನ್ನ ಪಾಡಿಗೆ ಹೆಂಡತಿ ಜತೆಗಿದ್ದಿ, ತಮ್ಮನ ಮದುವೆ ಬಗ್ಗೆ ಯೋಚನೆ ಮಾಡುವುದಿಲ್ಲ. ಪುನಃ ಹಣ ಕೊಡುವಂತೆ ತೊಂದರೆ ಕೊಡುತ್ತಿದ್ದಿಯಲ್ಲಾ ಎಂದಿದ್ದಾರೆ.
ಕೋಪಗೊಂಡ ಕುಮಾರ ಮನೆಯ ಛಾವಣಿಗೆ ಹಾಕಿರುವ ಸಿಮೆಂಟಿನ ಶೀಟ್ಗಳನ್ನು ಒಡೆದು, ನಾಳೆಯೊಳಗೆ ಹಣ ನೀಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ತೆರಳಿದ್ದ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ತಾಯಿ ಮನೆಗೆ ಬಂದು ಜಗಳ ತೆಗೆದ ಕುಮಾರ, 2 ಲಕ್ಷ ಹಣ ಕೊಡು, ನಾನು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದ್ದಾನೆ. ತಾಯಿ ಚಂದವ್ವ ಹಣ ಕೊಡಲು ನಿರಾಕರಿಸಿದಾಗ ಏಕಾಏಕಿ ತಾಯಿಯ ತಲೆ ಕೂದಲು ಹಿಡಿದೆಳೆದು ಮನೆ ಸಮೀಪದ ಸತ್ಯ ಸೇವಲಾಲ ಭವನದ ಹತ್ತಿರ ಎಳೆದೊಯ್ದು ಗೋಡೆಗೆ ಗುದ್ದಿಸಿ ತಲೆಗೆ ಕಲ್ಲಿನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾನೆ.
ಗಂಭೀರವಾಗಿ ಗಾಯಗೊಂಡ ಚಂದವ್ವ ಮುದಗಲ್ ಸರ್ಕಾರ ಆಸ್ಪತ್ರೆಗೆ ಚಿಕಿತ್ಸೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮುದಗಲ್ ಪೊಲೀಸರು ಕುಮಾರನನ್ನು ಬಂಧಿಸಿದ್ದಾರೆ.



