ಅಕ್ಟೋಬರ್ 1ರಿಂದ ನಗದುರಹಿತ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಜಾರಿ ಮಾಡುವ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಕೊಡುಗೆ ಘೋಷಿಸಿದೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ.
ಆರೋಗ್ಯ ಸಂಜೀವಿನಿ ಯೋಜನೆಗಾಗಿ ನೌಕರರ ವೇತನದಿಂದ ಗ್ರೂಪ್ಗೆ ಅನುಗುಣವಾಗಿ ಮಾಸಿಕ ವಂತಿಕೆ ಕಡಿತ ಆಗಲಿದ್ದು, ನೌಕರರು ಹಾಗೂ ಅವರ ಕುಟುಂಬದವರು ಯಾವುದೇ ಹಣ ಭರ್ತಿ ಮಾಡದೇ ಚಿಕಿತ್ಸೆ ಪಡೆಯಬಹುದಾಗಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ನೌಕರರ ವರ್ಗವಾರು ಕಂತು ವೇತನದಲ್ಲಿ ಕಡಿತಗೊಳ್ಳಲಿದ್ದು, ಕಂತಿನ ಮೊತ್ತದ ವಿವರ ನೀಡಲಾಗಿದೆ.
ಗ್ರೂಪ್ ಎ ನೌಕರರಿಗೆ ಮಾಸಿಕ 1,000 ರೂ., ಗ್ರೂಪ್ ಬಿ: 500 ರೂ., ಗ್ರೂಪ್ ಸಿ: 350 ರೂ., ಹಾಗೂ ಗ್ರೂಪ್ ಡಿ ನೌಕರರಿಗೆ ಮಾಸಿಕ 250 ರೂ. ಕಡಿತಗೊಳ್ಳಲಿದೆ.
ಈ ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಅನ್ವಯವಾಗಲಿದ್ದು, ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನಗದು ರಹಿತವಾಗಿ ಪಡೆಯಲು ಸಹಾಯಕವಾಗಲಿದೆ. ಅಕ್ಟೋಬರ್ನಿಂದಲೇ ಇದರ ಪ್ರಯೋಜನಗಳು ಲಭ್ಯವಾಗಲಿವೆ.



