ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಮಾದರಿಯಲ್ಲಿ ಯುವಕನ ಮೇಲೆ ಯುವತಿಯ ಸ್ನೇಹಿತರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ನನ್ನ ಹುಡುಗಿಗೆ ಫೋನ್, ಮೆಸೆಜ್ ಮಾಡ್ತೀಯಾ. ದರ್ಶನ್ ಕೇಸಲ್ಲಿ ಏನಾಯ್ತು ಗೊತ್ತಾ ಅಂತ ಯುವಕನೊಬ್ಬನ ಮೇಲೆ ಪುಂಡರ ಗ್ಯಾಂಗ್ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆ ವೇಳೆ ಪುಂಡರು ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಹೆಸರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಂತೆ ಇದು ಆಗುತ್ತೆ. ಎ1 ಹೇಮಂತ್, ಎ 2 ನಾನು ಎಂದು ಯುವಕನನ್ನು ಬೆತ್ತಲೆ ಮಾಡಿ, 8-10 ಯುವಕರು ಸೇರಿ ಹಲ್ಲೆ ಮಾಡಿ ವಿಡಿಯೋ ಮಾಡಿದ್ದಾರೆ.
ಯುವಕನನ್ನು ಅರೆಬೆತ್ತಲೆಗೊಳಿಸಿ ಯುವಕರ ಗುಂಪು ಹಲ್ಲೆ ನಡೆಸಿದ್ದು, ಯುವಕನ ಖಾಸಗಿ ಅಂಗಾಂಗಳ ಮೇಲೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. ಹಲ್ಲೆಯ ವೇಳೆ ಯುವತಿ ಕೂಡ ಕಾಣಿಸಿಕೊಂಡಿದ್ದಾಳೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಗೌಡ ಎಂಬವರನ್ನು ಬಂಧಿಸಲಾಗಿದೆ.
ಕುಶಾಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಕಾಲೇಜಿಗೆ ಹೋಗುವಾಗ ಕುಶಾಲ್ ಹಾಗೂ ಯುವತಿ ಮಧ್ಯೆ ಪ್ರೀತಿಯಾಗಿತ್ತು. ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ಸಮಯದಲ್ಲಿ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದರಿಂದ ಕುಶಾಲ್ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕೆ ಮಾತುಕತೆಗೆ ಕರೆಸಿ, ಯುವತಿ ತನ್ನ ಗೆಳೆಯ ಹಾಗೂ ಸ್ನೇಹಿತರ ಜೊತೆ ಸೇರಿ ಆತನನ್ನು ಕಾರಿನಲ್ಲಿ ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕೆರದೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.



