ವಿಜಯಪುರ: ಹಣ ಪಡೆದು ಕೆಲಸಕ್ಕೆ ಬರಲು ವಿಳಂಬ ಮಾಡಿದ್ದಕ್ಕೆ ಮೂವರು ಕಾರ್ಮಿಕರ ಮೇಲೆ ಮನಸೋಇಚ್ಛೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದವರ ಪೈಕಿ ಇಟ್ಟಿಗೆ ಕಾರ್ಖಾನೆ ಮಾಲೀಕ ಸೇರಿ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಇಟ್ಟಿಗೆ ಕಾರ್ಖಾನೆ ಮಾಲೀಕ ಖೇಮು ರಾಠೋಡ್, ವಿಶಾಲ ಜುಮನಾಳ ಹಾಗೂ ಸಚಿವ ಮಾನವರ ಬಂಧಿತ ಆರೋಪಿಗಳಾಗಿದ್ದು, ಪರಾರಿಯಾದ ಇಬ್ಬರಿಗಾಗಿ ಶೋಧ ನಡೆಸಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಕಳೆದ ಶನಿವಾರ ಮಾಲೀಕ ಖೇಮು ರಾಥೋಡ್, ಸಹಚರರಿಂದ ವಿಜಯಪುರ ಹೊರವಲಯದ ಇಟ್ಟಿಗೆ ಕಾರ್ಖಾನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಚಿಕ್ಕಲಕಿ ಗ್ರಾಮದ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ. ಮುಂಗಡ ಹಣ, ಕೆಲಸ ಮಾಡುವ ವಿಚಾರವಾಗಿ ಹಲ್ಲೆ ನಡೆದಿದೆ ಎಂದರು.
ಸಂಕ್ರಾಂತಿ ಹಬ್ಬಕ್ಕೆ ಹೋಗಿದ್ದವರು ಹಿದಿರುಗುವುದು ತಡವಾಗಿದ್ದಕ್ಕೆ ಮೂವರು ಕಾರ್ಮಿಕರ ಪಾದಗಳಿಗೆ ಕಟ್ಟಿಗೆ, ಪೈಪ್ಗಳಿಂದ ಹೊಡೆದಿದ್ದಾರೆ. ಕಾರ್ಮಿಕರ ಮೇಲೆ ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಮಾನವೀಯ ಹಲ್ಲೆ ಸಂಬಂಧ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಹಲ್ಲೆಗೊಳಗಾದ ಕಾರ್ಮಿಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸುಮ್ಮನೆ ಬಿಡುವುದಿಲ್ಲ:
ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಲ್ಲೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾರೇ ತಪ್ಪು ಮಾಡಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ಅಮಾನವೀಯ ಘಟನೆ
ರಾಯಚೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಎಲ್ಲರೂ ತಲೆತಗ್ಗಿಸುವಂತ ಅಮಾನವೀಯ ಘಟನೆ ಇದು. ಲೇಬರ್, ಪೊಲೀಸ್ ಕೇಸ್ ಎಲ್ಲಾ ಸೆಕೆಂಡರಿ. ಈ ತರ ಮನಸ್ಥಿತಿ ಇರುವಂತದ್ದು ನಮ್ಮ ರಾಜ್ಯದಲ್ಲಿ ನಡೆದಿದೆ ಅಂದರೆ ನನಗೆ ವೈಯಕ್ತಿಕವಾಗಿ ತಲೆತಗ್ಗಿಸುವಂತದ್ದು. ಕಾರ್ಮಿಕರನ್ನ ಹಿಗ್ಗಾ ಮುಗ್ಗಾ ಹೊಡೆದಿರುವುದನ್ನ ನಾನು ಮಾಧ್ಯಮಗಳ ಮುಖಾಂತರ ನೋಡಿದ್ದೇನೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಾನೂನಿನ ಕಠಿಣ ಕ್ರಮ ಪರಿಹಾರ ಅಲ್ಲಾ ಮನಸ್ಥಿತಿಗಳು ಬದಲಾಗಬೇಕು. ಬಾಲಕಾರ್ಮಿಕ ಪದ್ದತಿ ಕೂಡ ಬದಲಾಗಬೇಕು. ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಈ ರೀತಿಯ ಮನ್ಥಿತಿ ಬದಲಾಗಬೇಕು. ಇದಕಕೆ ನನ್ನ ಸಮ್ಮತಿಯಿದೆ. ಕಾರ್ಮಿಕ ಅಂತ ಅಲ್ಲಾ ಯಾರ ಮೇಲೂ ಇಂತಹ ಘಟನೆ ನಡೆಯಬಹುದು. ಕಾರ್ಮಿಕ ಅಂತ ಪದ ತೆಗೆದರು ಈ ರೀತಿ ಹೊಡಿಬಹುದಾ, ಇದು ಮನಸ್ಥಿತಿ. ಇಂತಹ ಮನಸ್ಥಿತಿಯನ್ನ ನಾವು ವಿರೋಧಿಸಬೇಕು ಎಂದಿದ್ದಾರೆ.



