ನಾನು ಶಿವನ ಭಕ್ತನಾಗಿದ್ದು, ಶಿವನಂತೆ ನೋವು ಎಂಬ ವಿಷ ನುಂಗಿ ವಿಷಕಂಠನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನ ಹಾಗೂ ತನ್ನ ತಾಯಿ ವಿರುದ್ಧ ಟೀಕೆ ಮಾಡಿದ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಅಸ್ಸಾಂನ ಡಾರಂಗ್ ನಲ್ಲಿ ಭಾನುವಾರ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರೇ ನನಗೆ ನಿಜವಾದ ರಿಮೋಟ್ ಕಂಟ್ರೋಲ್. ಅವರು ನೀಡಿದ ಆದೇಶವನ್ನೇ ಪಾಲಿಸುತ್ತೇನೆ ಹೊರತು ಯಾರ ಮಾತನ್ನು ಅಲ್ಲ ಎಂದರು.
ಇಡೀ ಕಾಂಗ್ರೆಸ್ ಪಕ್ಷ ನಾನು ಕಣ್ಣೀರು ಹಾಕುತ್ತಿದ್ದೇನೆ ಎಂದು ಅವಹೇಳನ ಮಾಡುತ್ತಿದೆ. ಜನರೇ ನನ್ನ ದೇವರು. ನನ್ನ ನೋವನ್ನು ಜನರ ಮುಂದೆ ಹೇಳಿಕೊಳ್ಳುತ್ತೇನೆ. ಬೇರೆ ಎಲ್ಲಿ ಹೇಳಿಕೊಳ್ಳಲಿ? ಅವರೇ ನನ್ನ ಗುರುಗಳು. ಜನರೇ ನನ್ನ ರಿಮೋಟ್ ಕಂಟ್ರೋಲ್. ನನಗೆ ಬೇರೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ ಎಂದು ಅವರು ಹೇಳಿದರು.
ಆರ್ ಜೆಡಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಮಾಡಿದ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಮೋದಿ ತಾಯಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವಾಗ ಪಕ್ಷದ ಯಾವೊಬ್ಬ ಮುಖಂಡ ಕೂಡ ವೇದಿಕೆ ಮೇಲೆ ಇರಲಿಲ್ಲ ಎಂದು ಹೇಳಿದೆ. ಆದರೂ ಪ್ರಧಾನಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ಟೀಕೆ ಮುಂದುವರಿಸಿದ್ದಾರೆ.



