ಬೆಂಗಳೂರು: ಹಿರಿಯ ಪತ್ರಕರ್ತರಿಗೆ ಮಾಸಾಶನ ನೀಡಲು ಇರುವ ಷರತ್ತುಗಳನ್ನು ಸಡಿಲಿಸಿ ಎಲ್ಲಾ ಹಿರಿಯ ಪತ್ರಕರ್ತರಿಗೂ ಮಾಸಾಶನ ನೀಡಲು ಕ್ರಮ ಕೈಗೊಳ್ಳುವಂತೆ ಹಿರಿಯ ಪತ್ರಕರ್ತರ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಇಂದು ನಡೆದ ಹಿರಿಯ ಪತ್ರಕರ್ತರ ವೇದಿಕೆಯ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ, ವಾರ್ತಾಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮಗಳಲ್ಲಿ 20 ವರ್ಷ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ 60 ವರ್ಷ ತಲುಪಿದ ಎಲ್ಲ ಹಿರಿಯ ಪತ್ರಕರ್ತರಿಗೂ ಮಾಸಾಶನ ನೀಡಬೇಕು. ವಾರ್ತಾ ಇಲಾಖೆಯ ಮಾನ್ಯತಾ ಪತ್ರವನ್ನು ಜೀವಿತಾವಧಿಗೆ ನೀಡಬೇಕು’ ಎಂದು ವೇದಿಕೆಯ ಅಧ್ಯಕ್ಷ ಆರ್.ಪಿ.ಸಾಂಬಸದಾಶಿವ ರೆಡ್ಡಿ ಅವರು ಮಂಡಿಸಿದ ನಿರ್ಣಯಗಳನ್ನು ಸಭೆ ಅಂಗೀಕರಿಸಿತು.
ಭಾರತೀಯ ಹಿರಿಯ ಪತ್ರಕರ್ತರ ಒಕ್ಕೂಟ(ಎಸ್ ಜೆಎಫ್ ಐ)ದ ಕಾರ್ಯದರ್ಶಿ ಕೆ. ಶಾಂತಕುಮಾರಿ ಮಾತನಾಡಿ,ಹಿರಿಯ ಪತ್ರಕರ್ತರಿಗೆ ಮಾಸಾಶನ ನೀಡಲು ಇಲ್ಲದ ಷರತ್ತುಗಳನ್ನು ಹಾಕಿ ಸರ್ಕಾರ ಅಮಾನೀಯವಾಗಿ ನಡೆಸಿಕೊಳ್ಳುತ್ತಿದೆ. ದೇಶದಾದ್ಯಂತ ಏಕರೂಪದ ಮಾಸಾಶನ ಪದ್ಧತಿ ಜಾರಿಗೆ ಬರಬೇಕು. ಹಿರಿಯ ಪತ್ರಕರ್ತರ ವೇದಿಕೆಗೆ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಎಸ್.ಜೆ.ಎಫ್.ಐ. ಕಾರ್ಯಕಾರಿ ಸಮಿತಿ ಸದಸ್ಯ ಶಾಸ್ತ್ರಿ ರಾಮಚಂದ್ರನ್ ಮಾತನಾಡಿ, ದೇಶದಾದ್ಯಂತ ಏಕರೂಪದ ಮಾಸಾಶನ ಮತ್ತು ಆರೋಗ್ಯನೀತಿ ರೂಪಿಸಿ ಅದನ್ನು ರಾಜ್ಯ ಸರ್ಕಾರಗಳ ಮೂಲಕ ಜಾರಿಗೊಳಿಸಬೇಕು. ರೈಲು ಪ್ರಯಾಣಕ್ಕೆ ಸಂಬಂಧಿಸಿದ ರಿಯಾಯಿತಿ ಸೌಲಭ್ಯವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಅಗಲಿದ ಹಿರಿಯ ಪತ್ರಕರ್ತರಿಗೆ ಸಭೆ ಗೌರವ ಶ್ರದ್ಧಾಂಜಲಿ ಸಲ್ಲಿಸಿತು.
ಹಿರಿಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಆರ್. ಪಿ. ಸಾಂಬ ಸದಾಶಿವ ರೆಡ್ಡಿ ಕಾರ್ಯಾಧ್ಯಕ್ಷ ಎಮ್.ಎ. ಪೊನ್ನಪ್ಪ, ಉಪಾಧ್ಯಕ್ಷ ಸೋಮಸುಂದರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಾಜೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಆರ್. ವೆಂಕಟೇಶ ಪ್ರಸಾದ್, ಖಜಾಂಚಿ ಬಿ.ನಾರಾಯಣ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು.



