ನಾಯಕಿ ಸ್ಮೃತಿ ಮಂದಾನ ತೀವ್ರ ಜ್ವರದಿಂದ ಬಳಲುತ್ತಿದ್ದರೂ ಅಖಾಡಕ್ಕೆ ಇಳಿದು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರೋಚಕ ಗೆಲುವಿನ ರೂವಾರಿ ಆಗಿದ್ದೂ ಅಲ್ಲದೇ ತಂಡಕ್ಕೆ ೨ನೇ ಬಾರಿ ಪ್ರಶಸ್ತಿ ತಂದುಕೊಟ್ಟಿದ್ದಾರೆ.
ಹೌದು ಗುರುವಾರ ನಡೆದ ಡಬ್ಲೂಪಿಎಲ್ ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂದಾನ ಮೈದಾನಕ್ಕೆ ಇಳಿಯುವ ಸ್ಥಿತಿಯಲ್ಲಿಯೇ ಇರಲಿಲ್ಲ. ತೀವ್ರ ಜ್ವರದಿಂದ ಬಳಲುತ್ತಿದ್ದ ಸ್ಮೃತಿ ಮಹತ್ವದ ಪಂದ್ಯದಲ್ಲಿ ಆಡಲು ನಿರ್ಧರಿಸಿದ್ದೂ ಅಲ್ಲದೇ ಗೆಲುವಿನ ರೂವಾರಿ ಆದರು. ಸ್ಮೃತಿ ಮಂದಾನ 41 ಎಸೆತಗಳಲ್ಲಿ 87 ರನ್ ಸಿಡಿಸಿ ೨೦೪ ರನ್ ಗಳ ದಾಖಲೆ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಲು ಪ್ರಮುಖ ಪಾತ್ರ ವಹಿಸಿದರು.
ಈ ವಿಷಯವನ್ನು ಕೋಚ್ ಮಲೋಲಾನ್ ರಂಗರಾಜನ್ ಆರ್ ಸಿಬಿ ೬ ವಿಕೆಟ್ ಗಳ ರೋಚಕ ಜಯ ಸಾಧಿಸಿದ ನಂತರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹೌದು, ಆಕೆ ತುಂಬಾ ಜ್ವರದಿಂದ ಬಳಲುತ್ತಿದ್ದರು. ನಾನು ಪಂದ್ಯಕ್ಕೆ ಮುನ್ನ ಆಡಲು ಸಾಧ್ಯವೇ ಎಂದು ಪ್ರಶ್ನಿಸಿದಾಗ, ನಾನು ಆಡುತ್ತೇನೆ. ಯಾವುದೇ ಸಮಸ್ಯೆ ಇಲ್ಲ ಎಂದರು.
ಸ್ಮೃತಿ ಅಂದರೆ ಹೀಗೆ. ಆಕೆ ಯಾವುದಕ್ಕೂ ಹಿಂಜರಿಯುವುದಿಲ್ಲ. ಎಂತಹ ಪರಿಸ್ಥಿತಿಯಲ್ಲೂ ತಂಡಕ್ಕಾಗಿ ಅವರು ಮುಂದೆ ನಿಲ್ಲುತ್ತಾರೆ. ಜ್ವರ ಇದೆ ಎಂದು ಅನಿಸದೇ ಇರುವಷ್ಟು ಅದ್ಭುತವಾಗಿ ಆಡಿ ಪಂದ್ಯ ಗೆಲ್ಲಿಸಿದರು ಎಂದು ಕೋಚ್ ವಿವರಿಸಿದರು.



