ಬೀದರ್: ಅರಣ್ಯ ಭೂಮಿ ಒತ್ತುವರಿ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ಸಮ್ಮುಖದಲ್ಲೇ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಹಾಗೂ ಎಂಎಲ್ಸಿ ಭೀಮರಾವ್ ಪಾಟೀಲ್ ಕೈ ಕೈ ಮಿಲಾಯಿಸಿದ ಘಟನೆ ಬೀದರ್ ಕೆಡಿಪಿ ಸಭೆಯಲ್ಲಿ ನಡೆದಿದೆ.
ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹಾಗೂ ಸಚಿವರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಒತ್ತುವರಿ ವಿಷಯದಲ್ಲಿ ಆರಂಭವಾದ ಮಾತಿನ ಚಕಮಕಿ ವೈಯಕ್ತಿಕವಾಗಿ ಜಗಳ ತಿರುಗಿದ್ದು, ಮೇಲ್ಮನೆ ಸದಸ್ಯ ಭೀಮರಾವ್ ಪಾಟೀಲ್ ಸ್ಥಳದಿಂದ ಎದ್ದುಬಂದು ಶಾಸಕರ ಬಳಿ ಬಂದಿದ್ದಾರೆ. ಈ ವೇಳೆ ಪರಿಸ್ಥಿತಿ ಕೈ ಮೀರಿ ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಇಬ್ಬರನ್ನೂ ದೂರ ತಳ್ಳಿ ಹೆಚ್ಚಿನ ಅನಾಹುತ ತಡೆದಿದ್ದಾರೆ. ನಂತರ ವೇದಿಕೆ ಮೇಲಿಂದ ಇಳಿದು ಬಂದ ಸಚಿವ ಈಶ್ವರ್ ಖಂಡ್ರೆ ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಈ ವೇಳೆ ಅವರನ್ನು ಕೂಡ ದೂರ ತಳ್ಳಿದ ಘಟನೆ ನಡೆದಿದೆ.
ಹುಮನಾಬಾದ್ನಲ್ಲಿರುವ ಒಂದು ಎಕರೆ ಅರಣ್ಯ ಪ್ರದೇಶವನ್ನು ಎಂಎಲ್ಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಕೊಡಿ ಎಂದು ಉಸ್ತುವಾರಿ ಸಚಿವರಿಗೆ ಕೇಳಿದರು. ಈ ವೇಳೆ ಯಾವುದೇ ಜಾಗ ಒತ್ತುವರಿಯಾಗಿಲ್ಲ ಎಂದು ಎಂಎಲ್ಸಿ ಭೀಮರಾವ್ ಪಾಟೀಲ್ (Bhimrao Patil) ಹಾಗೂ ಚಂದ್ರಶೇಖರ ಪಾಟೀಲ್ (Chandrashekar Patil) ಹೇಳಿದರು. ಆಗ ಸಿದ್ದು ಪಾಟೀಲ್ ಗರಂ ಆಗಿದ್ದಾರೆ.
ಈ ವೇಳೆ ಭೀಮರಾವ್ ಪಾಟೀಲ್ ಮಾತನಾಡಿ, 2028ಕ್ಕೆ ನೋಡು, ಏನು ಮಾಡ್ತೇನೆ ಅಂತ ಎಂದಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದು, ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಈ ವೇಳೆ ಸ್ವತಃ ಸಚಿವ ಈಶ್ವರ್ ಖಂಡ್ರೆ ಅವರು ಮನವೊಲಿಸಲು ಹರಸಾಹಸಪಟ್ಟರು. ಬಳಿಕ ಸಭೆಯನ್ನು ಕೆಲವು ನಿಮಿಷಗಳ ಕಾಲ ಮುಂದೂಡಿದರು. ಎಂಎಲ್ಸಿಗಳಾದ ಭೀಮರಾವ್ ಪಾಟೀಲ್ ಮತ್ತು ಚಂದ್ರಶೇಖರ ಪಾಟೀಲ್ ಸಭೆಯಿಂದ ಹೊರನಡೆದರು.



