ಜಮ್ಮು ಕಾಶ್ಮೀರದ ಪೆಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರು ಪ್ರಮುಖ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಲಷ್ಕರ್ ಕಮಾಂಡರ್ ಸುಲೇಮಾನ್ ಶಾ ಅಲಿಯಾಸ್ ಹಶೀಮ್ ಮೂಸಾ ಹಾಗೂ ಮೂಸಾ ಫೌಜಿ ಎಂದೇ ಕುಖ್ಯಾತಿ ಪಡೆದಿದ್ದ ಪೆಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹತ್ಯೆಯಾಗಿದ್ದಾನೆ. ಹತ್ಯೆಯಾದ ಸುಲೇಮಾನ್ ಶಾ ಮತ್ತು ಅಬು ತಲ್ಹಾ ಅವರ ತಲೆಗೆ ತಲಾ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಮೂಸಾ ಪೆಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದು ಮಾತ್ರವಲ್ಲ, ಕಳೆದ ವರ್ಷ ಜಮ್ಮು ಕಾಶ್ಮೀರದ ಶ್ರೀನಗರ- ಸೋನಮಾರ್ಗ್ ಹೆದ್ದಾರಿಯ ಕಾಮಗಾರಿ ನಡೆಸುತ್ತಿದ್ದ 7 ಕಾರ್ಮಿಕರನ್ನು ಹತ್ಯೆ ಪ್ರಕರಣದ ರೂವಾರಿಯೂ ಆಗಿದ್ದ.
ಜಮ್ಮು ಕಾಶ್ಮೀರ ಪೊಲೀಸರ ನೆರವಿನೊಂದಿಗೆ ಭಾರತೀಯ ಸೇನೆ ಮಹದೇವ ಬೆಟ್ಟದಲ್ಲಿ ನಡೆಸಿದ ಆಪರೇಷನ್ ಮಹದೇವ ಕಾರ್ಯಾಚರಣೆಯಲ್ಲಿ ಭರ್ಜರಿ ಯಶಸ್ಸು ಪಡೆದಿದ್ದು, ಒಂದು ಎಂ4 ಮಿಷನ್ ಗನ್, 2 ಎಕೆ-47 ಹಾಗೂ 17 ಗ್ರೆನೇಡ್ ಹಾಗೂ ಹಲವಾರು ರೈಫಲ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
14 ದಿನಗಳ ಹಿಂದೆ ಉಗ್ರರು ಸಂಪರ್ಕ ಸಾಧಿಸಲು ಯತ್ನಿಸಿದ ಸುಳಿವಿನ ಮೇರೆಗೆ ಮೂವರು ವಿದೇಶೀ ಉಗ್ರರು ನೆಲೆಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಭಾರತೀಯ ಸೇನೆ ಜಬರ್ವಾನ್ ಮತ್ತು ಮಹದೇವ್ ವಲಯದ ನಡುವಿನ ಪರ್ವತಗಳ ನಡುವೆ ಡಚಿಗಾಮ್ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.



