ಬೆಂಗಳೂರು:ನೆಲಮಂಗಲ ತಾಲ್ಲೂಕಿನ ಐತಿಹಾಸಿಕ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಗೆ ಹೋಗಿ ನಾಪತ್ತೆಯಾಗಿರುವ ಕಾಡುಗೋಡಿಯ ಸಾಫ್ಟ್ವೇರ್ ಉದ್ಯೋಗಿ ಮಧ್ಯಪ್ರದೇಶದ ಇಂದೋರ್ ಮೂಲದ ಅದ್ವೈತ್ ಉಪಾಧ್ಯಾಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾದ ಅದೈತ್ ಉಪಾಧ್ಯಾಯ ಅವರ ಹುಡುಕಾಟಕ್ಕಾಗಿ ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದು ಪೂರ್ವನಿಯೋಜಿತ ಆತ್ಮಹತ್ಯೆ ಎಂಬ ಅನುಮಾನ ಬರತೊಡಗಿದೆ.
ಪೋಲಿಸರು ಅದ್ವೈತ್ ವಾಸಿಸುತ್ತಿದ್ದ ಕಾಡುಗೋಡಿಯ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಅತನ ಲ್ಯಾಪ್ಟಾಪ್ ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಶಿವಗಂಗೆಯ ಶಾಂತಲಾ ಡ್ರಾಪ್ನಿಂದ ಕೆಳಗೆ ಬಿದ್ದರೆ ಎಷ್ಟೊತ್ತಿಗೆ ಸಾಯಬಹುದು ಎಂದು ಹುಡುಕಾಟ ನಡೆಸಿರುವುದು ಕಂಡುಬಂದಿದೆ.
ಹುಡುಕಾಟದಲ್ಲಿ ಬೆಳಿಗ್ಗೆ 7:30 ಕ್ಕೆ ಬಿದ್ದರೆ ಸಾವು ಸಂಭವಿಸಬಹುದು ಎಂದು ಉತ್ತರ ನೀಡಿತ್ತು. ಈ ಕಾರಣಕ್ಕೆ ಆ.4 ರಂದೇ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಬಳಿಗೆ ಅತ ಬಂದಿದ್ದಾನೆ.
ಪೂರ್ವನಿಯೋಜಿತವಾಗಿ ಅಂದುಕೊಂಡಂತೆ ಶಿವಗಂಗೆಗೆ ಟ್ರಕ್ಕಿಂಗ್ ತೆರಳಿದ್ದ ಅದ್ವತ್, ಬೆಟ್ಟ ಹತ್ತುತ್ತಿದ್ದಂತೆ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಾಪ್ತಿ ಚೌಹಾಣ್ಗೆ ಕೊನೆಯದಾಗಿ ಫೋಟೋ ಒಂದನ್ನು ಕಳುಹಿಸಿದ್ದರು. ಅದಾದ ನಂತರ ಮೊಬೈಲ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ಬೆಟ್ಟದ ತುತ್ತ ತುದಿಯಲ್ಲಿ ಇತರ ಚಾರಣಿಗರು ತೆಗೆದ ಫೋಟೋದಲ್ಲಿ ಅದೈತ್ ಇರುವುದು ಪತ್ತೆಯಾಗಿದೆ.
ಅದ್ವೈತ್ ಶಿವಗಂಗೆ ಬೆಟ್ಟ ಹತ್ತುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾರ್ಕಿಂಗ್ ಸ್ಥಳದಲ್ಲಿಯೇ ಬುಲೆಟ್ ಇದೆ. ಯುವಕ ಮಾತ್ರ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ನೆಲಮಂಗಲ ನಗರ ಸಿಪಿಐ ಭರತ್ ಗೌಡ ಅವರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿ, ಎಸ್ಡಿಆರ್ಎಫ್ ತಂಡ ಹಾಗೂ ನುರಿತ ಚಾರಣಿಗರು ಜೀವದ ಪ್ರಾಣ ಪಣಕ್ಕಿಟ್ಟು ಮೂರನೇ ದಿನದ ಬೃಹತ್ ಶೋಧ ಕಾರ್ಯ ಆರಂಭಿಸಿದ್ದಾರೆ.
ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಬೆಟ್ಟದ ಪ್ರಪಾತ ಹಾಗೂ ಕಡಿದಾದ ಜಾಗಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಬೆಟ್ಟದ ತುತ್ತ ತುದಿಯ ಶಾಂತಲಾ ಡ್ರಾಪ್ ಆಳವಾದ ಕಂದಕದಿಂದ ಕೂಡಿದ್ದು, ಅಲ್ಲಿ ಶೋಧ ನಡೆಸುವುದು ಸವಾಲಾಗಿ ಪರಿಣಮಿಸಿದೆ.
ಶಾಂತಲಾ ಡ್ರಾಪ್:
ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿದ್ದು ಹೊಯ್ಸಳ ವಿಷ್ಣುವರ್ಧನನ ರಾಣಿ, ನಾಟ್ಯರಾಣಿ ಶಾಂತಲೆ ಇಲ್ಲಿಂದ ಕಾಲುಜಾರಿ ಅಥವಾ ಬಿದ್ದು ಮರಣ ಹೊಂದಿದಳು ಎಂಬ ಐತಿಹಾಸಿಕ ಜನಪದ ನಂಬಿಕೆಯಿಂದ ಈ ಸ್ಥಳಕ್ಕೆ ‘ಶಾಂತಲಾ ಡ್ರಾಪ್’ ಎಂದು ಕರೆಯಲಾಗುತ್ತದೆ.
ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿರುವ ಶಾಂತಲಾ ಡ್ರಾಪ್ ಬಳಿ ಹಲವು ಸೂಚನಾ ಫಲಕಗಳು ಇವೆ. ಈ ಜಾಗ ಶಿವಗಂಗೆ ಬೆಟ್ಟದ ತುಟ್ಟತುದಿಯಲ್ಲಿರುವ ಅತ್ಯಂತ ಅಪಾಯಕಾರಿ ಮತ್ತು ಆಳವಾದ ಬಂಡೆಯ ಪ್ರದೇಶವಾಗಿದೆ.
ಶಿವಗಂಗೆ ಬೆಟ್ಟವು ಸಮುದ್ರ ಮಟ್ಟದಿಂದ 4,800 ಆಡಿಗಳಷ್ಟು ಎತ್ತರವಿದ್ದು, ಬೆಟ್ಟದಲ್ಲಿ ಅಪಾಯಕಾರಿ ಸ್ಥಳಗಳಿವೆ, ಅಯತಪ್ಪಿ ಬಿದ್ದರೆ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ.



