ಜಮೀನಿನಲ್ಲಿ ಬೆಳೆಗೆ ಅನುಕೂಲಕ್ಕಾಗಿ ನೀರನ್ನು ಸಂಗ್ರಹ ಮಾಡಲು ಕೃಷಿ ಹೊಂಡ ನಿರ್ಮಿಸಿದ ಸ್ಥಳದಲ್ಲಿ ನೀರಿಗೆ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರುಬರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ನಿವಾಸಿಗಳಾದ ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಬಡಾವಣೆಯ ಕುಮಾರಸ್ವಾಮಿ ಎಂಬವರ ಮಕ್ಕಳಾದ ಯೋಗೀಶ್ (9) ಸಂಜಯ್ (7) ಮೃತಪಟ್ಟಿದ್ದಾರೆ. ಕುರುಬರದೊಡ್ಡಿ ಗ್ರಾಮದ ಮುಖ್ಯರಸ್ತೆಯ ನರ್ಸರಿ ಸಮೀಪದ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ದಸರಾ ರಜೆ ಇದ್ದ ಕಾರಣ ಮಕ್ಕಳು ಹನೂರು ಪಟ್ಟಣದ ಆರ್ಎಸ್ ದೊಡ್ಡಿಯಿಂದ ಅಜ್ಜಿ ಮನೆ ಇರುವ ಕುರುಬರ ದೊಡ್ಡಿ ಗ್ರಾಮಕ್ಕೆ ಬಂದಿದ್ದರು. ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ನರ್ಸರಿ ಸಮೀಪದ ಕೃಷಿ ಹೊಂಡದತ್ತ ತೆರಳಿದಾಗ ಮಕ್ಕಳು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ಮಕ್ಕಳ ತಂದೆ ಕುಮಾರಸ್ವಾಮಿ ಅವರು ಪಟ್ಟಣದ ಖಾಸಗಿ ಜವಳಿ ಅಂಗಡಿಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಶವಗಳೆದುರು ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ರಾಮಪುರ ಠಾಣೆ ಇನ್ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕಾರ್ಯಮಾಡಲು ಕುಟುಂಬಸ್ಥರಿಗೆ ತಿಳಿಸಿದರು .



