ಬೆಂಗಳೂರು: ಕಳೆದ ವರ್ಷ 2024ರ ಕೇವಲ ಆರು ತಿಂಗಳಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸಂಭವಿಸಿದ ವಿವಿಧ ವಿದ್ಯುತ್ ಅವಘಡಗಳಲ್ಲಿ 118 ಮಂದಿ ಮೃತಪಟ್ಟಿದ್ದಾರೆ.
ಸಾವಿನ ಪ್ರಮಾಣವು ಹಿಂದಿನ ದಶಕವೊಂದರಲ್ಲಿ ದಾಖಲಾದ ಸರಾಸರಿ ವಾರ್ಷಿಕ ಸಾವುಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ.ಬೆಸ್ಕಾಂ ಸುಂಕ ಪರಿಷ್ಕರಣೆ ಪ್ರಸ್ತಾವನೆಯ ಭಾಗವಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ ಸಿ) ಸಲ್ಲಿಸಿದ ವರದಿಯಲ್ಲಿ 118 ಮಂದಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಅವಘಡಗಳಿಗೆ ಸಾರ್ವಜನಿಕರ ನಿರ್ಲಕ್ಷ್ಯವೇ ಕಾರಣ ಎಂದು ಬೆಸ್ಕಾಂ ಅಧಿಕಾರಿಗಳು ದೂಷಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?
2015-2016 ರಿಂದ 2023-2024 ರ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳನ್ನು ಒಳಗೊಂಡಿರುವ ಬೆಸ್ಕಾಂ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ಸರಾಸರಿ 109.5 ಜನರು ವಿದ್ಯುತ್ ಅಪಘಾತಗಳಲ್ಲಿ ಸಾವನ್ನಪ್ಪಿದ್ದರು. 2024 ರಲ್ಲಿ ಕೇವಲ ಆರು ತಿಂಗಳಲ್ಲಿ (ಏಪ್ರಿಲ್ ನಿಂದ ಅಕ್ಟೋಬರ್) ಆ ಸಂಖ್ಯೆ ದಾಟಿ ಸಾವುಗಳು ಸಂಭವಿಸಿವೆ. ಅದೇ ಅವಧಿಯಲ್ಲಿ, ವಿದ್ಯುತ್ ಅಪಘಾತಗಳಿಂದಾಗಿ 61 ಪ್ರಾಣಿಗಳು ಮೃತಪಟ್ಟಿವೆ.
ಪಾದಚಾರಿ ಮಾರ್ಗಗಳಲ್ಲಿ ತಂತಿಗಳು ತುಂಡಾಗಿ ನೇತಾಡುವುದು ಅಥವಾ ಬಿದ್ದಿರುವುದು ಸಾಮಾನ್ಯ. ಇಂಥ ಕಡೆಗಳಲ್ಲಿ ನಡೆಯಲು ಭಯವಾಗುತ್ತದೆ. ಒಂದು ತಪ್ಪು ಹೆಜ್ಜೆ ಇಟ್ಟರೆ ಮಾರಕವಾಗಬಹುದು’ ಎಂದು ಸುದ್ದಗುಂಟೆಪಾಳ್ಯದ ನಿವಾಸಿಯೊಬ್ಬರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಅಪಾಯಕಾರಿ ಸ್ಥಳ ದುರಸ್ತಿ:
2023ರಲ್ಲಿ ಎಸ್ಜಿ ಪಾಳ್ಯ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬವೊಂದರಲ್ಲಿ ನೇತಾಡುತ್ತಿದ್ದ ಆಪ್ಟಿಕಲ್ ಫೈಬರ್ ಕೇಬಲ್ ಚಲಿಸುವ ನೀರಿನ ಟ್ಯಾಂಕರ್ಗೆ ತಗುಲಿ ಕುಸಿದು ಬಿದ್ದಿತ್ತು. ಶಾಲೆಗೆ ವಿದ್ಯಾರ್ಥಿಯೊಬ್ಬ ಕೇಬಲ್ ತಗುಲಿ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ.
ಏಪ್ರಿಲ್ ಮತ್ತು ಸೆಪ್ಟೆಂಬರ್ 2024 ರ ನಡುವೆ 39,024 ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಹೇಳಿಕೊಂಡಿದೆ ಆದರೆ, 17,463 ಕಡೆಗಳಲ್ಲಿ ಇನ್ಮೂ ಸಮಸ್ಯೆಗಳು ಹಾಗೇಯೇ ಇವೆ. ವಿದ್ಯುತ್ ಮೂಲಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ



