ಪಹಲ್ಗಾವ್ ದಾಳಿ ಬೆನ್ನಲ್ಲೇ ಪಾಕ್ ಆಕ್ರಮಿತ ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ 130 ಉಗ್ರರನ್ನು ಸಕ್ರಿಯಗೊಳಿಸಲಾಗಿದ್ದು, ಅವರು 42 ದಾಳಿ ನಡೆಸಲ ಸಿದ್ಧತೆ ಆರಂಭಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕಳೆದ ಒಂದು ತಿಂಗಳಿಂದ ಉಗ್ರರ ಚಲನವಲನಗಳ ಮೇಲೆ ನಿಗಾ ವಹಿಸಿರುವ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಈ ಮಾಹಿತಿ ರವಾನಿಸಿದ್ದು, ಪಹಲ್ಗಾವ್ ದಾಳಿ ನಂತರ 42 ದಾಳಿ ಸಿದ್ಧತೆಗಳು ನಡೆದಿವೆ. ಇದರಲ್ಲಿ ಕನಿಷ್ಠ 139 ಉಗ್ರರು ಪಾಲ್ಗೊಳ್ಳಲು ನಿರೀಕ್ಷೆ ಇದೆ ಎಂದು ಹೇಳಿದೆ.
ಪಹಲ್ಗಾವ್ ದಾಳಿಯ ಮುನ್ನೆಚ್ಚರಿಕೆ ನೀಡಲು ವಿಫಲವಾಗಿದ್ದ ಗುಪ್ತಚರ ಇಲಾಖೆ ಜೊತೆ ನಡೆದ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
139 ಉಗ್ರರು ಈಗಾಗಲೇ ಕಣಿವೆ ಪ್ರದೇಶದಲ್ಲಿ ನೆಲೆಸಿದ್ದು, 70 ಉಗ್ರರು ಕಾಶ್ಮೀರದಲ್ಲಿ ಹಾಗೂ 60-65 ಉಗ್ರರು ಜಮ್ಮು, ರಜೌರಿ, ಪೂಣಂಚ್ ಜಿಲ್ಲೆಗಳಲ್ಲಿ ಬೀಡುಬಿಟ್ಟಿದ್ದಾರೆ. ಇದರಲ್ಲಿ 115 ಉಗ್ರರು ಪಾಕಿಸ್ತಾನಿಯರು ಎಂದು ಹೇಳಲಾಗಿದೆ.
ತರಬೇತಿ ಪಡೆದ 150ರಿಂದ 200 ಉಗ್ರರು ವಿವಿಧ ಶಿಬಿರಗಳಲ್ಲಿ ತಂಗಿದ್ದು, ಇವರಿಗೆ ಜಮ್ಮು ಕಾಶ್ಮೀರದಲ್ಲಿ ದಾಳಿಯ ಯೋಜನೆ ಹಾಗೂ ಸ್ಥಳ ಹಾಗೂ ಸಮಯದ ಮಾಹಿತಿ ನೀಡಿ ಸಿದ್ಧಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಬಾಟಲ್ ಸೆಕ್ಟರ್ ನಲ್ಲಿ ದಾಳಿ ನಡೆಸಲು ಉಗ್ರರು ನಡೆಸಿರುವ ಸಂಚಿಗೆ ಪಾಕಿಸ್ತಾನ ಸರ್ಕಾರ ತೆರೆಮರೆಯಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಸುಮಾರು 642 ಮುಜಾಹಿದ್ದೀನ್ ಗಳು ಇತ್ತೀಚೆಗೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಇವರು ಚೇತರಿಸಿಕೊಂಡ ನಂತರ ದಾಳಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಮತ್ತೊಂದು ಮಾಹಿತಿ ಹೇಳಿದೆ.
ಹಿಜ್ಬುಲ್ ಮುಜಾಹಿದ್ದೀನ್, ಜೈಶೆ ಇ-ಮೊಹಮದ್, ಲಷ್ಕರ್ ಇ-ತೋಯ್ಬಾ ಮುಂತಾದ ಸಂಘಟನೆಗಳು ಜಮ್ಮು ಕಾಶ್ಮೀರದಲ್ಲಿ ಈಗಾಗಲೇ 60 ವಿದೇಶೀ ಉಗ್ರರನ್ನು ತನ್ನ ಗುಂಪಿಗೆ ಸೇರಿಸಿಕೊಂಡಿದೆ. ವಿದೇಶೀಯರನ್ನು ಭಾರತೀಯ ಸೇನೆ ಗುರುತಿಸುವುದು ಕಷ್ಟ ಎಂಬ ಕಾರಣಕ್ಕೆ ಇವರನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಪಾಕಿಸ್ತಾನ ಮೂರು ಬಾರಿ ನಿಯಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಭಾರತದೊಳಗೆ ನುಸುಳಲು ಯತ್ನಿಸಿದ 5 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು.



