ಒಂದಲ್ಲ, ಎರಡಲ್ಲ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ 19 ಬೆಂಗಾವಲು ರಸ್ತೆ ಮಧ್ಯೆ ಕೆಟ್ಟು ನಿಂತ ಘಟನೆ ಶುಕ್ರವಾರ ನಡೆದಿದೆ.
ಸಚಿವರು, ಶಾಸಕರು, ಸಂಸದರು ಹೀಗೆ ಜನಪ್ರತಿನಿಧಿಗಳ ಕಾರುಗಳು ಅಂದರೆ ಎಲ್ಲರ ಕಣ್ಣು ಕುಕ್ಕುತ್ತವೆ. ಏಕೆಂದರೆ ಬಹುತೇಕ ಎಲ್ಲರ ಬಳಿ ಐಷಾರಾಮಿ ಹಾಗೂ ಸುವ್ಯವಸ್ಥೆಯಲ್ಲಿರುವ ಕಾರುಗಳಾಗಿರುತ್ತವೆ. ಅದರಲ್ಲೂ ಮುಖ್ಯಮಂತ್ರಿ ಅವರ ಬೆಂಗಾವಲು ವಾಹನಗಳಂತೂ ಉತ್ಕೃಷ್ಟ ಗುಣಮಟ್ಟದ್ದಾಗಿರುತ್ತದೆ.
ಹಾಗಂತ ನೀವು ಅಂದುಕೊಂಡಿದ್ದರೆ ತಪ್ಪು. ಏಕೆಂದರೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರ ಬೆಂಗಾವಲು ವಾಹನಗಳು ಒಂದೇ ದಿನ ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತಿದ್ದು, ಕಾರಿನ ಒಳಗೆ ಆರಾಮವಾಗಿ ಕೂತಿರಬೇಕಾದ ಸಿಬ್ಬಂದಿ ಕಾರು ತಳ್ಳುತ್ತಾ ಸಾಗಿದ ವೀಡಿಯೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೌದು, ಮೋಹದ್ ಯಾದವ್ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಅವರ ಬೆಂಗಾವಲಿಗೆ ಇದ್ದ ವಾಹನಗಳು ಜರ್ಕ್ ಹೊಡೆಯಲು ಪ್ರಾರಂಭಿಸಿದ್ದು, ದೂರ ಸಾಗಿದಂತೆ ಒಂದೊಂದೇ ಕಾರುಗಳು ರಸ್ತೆ ಬದಿ ಕೆಟ್ಟು ನಿಂತವು.
ಮೂಲಗಳ ಕಾರ ಕಾರಿಗೆ ತುಂಬಿಸಿದ ಕಲಬೆರಕೆ ಡೀಸೆಲ್ ಕಾರಣ ಎಂದು ಹೇಳಲಾಗಿದೆ. ಅಂದರೆ ಮಧ್ಯಪ್ರದೇಶದಲ್ಲಿ ಕಲಬೆರಕೆ ಡೀಸೆಲ್ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂಬುದು ಇದು ಹೇಳುತ್ತದೆ. ಸಿಎಂಗೆ ನಂತರ ಪರ್ಯಾಯವಾಗಿ ಬೆಂಗಾವಲು ವಾಹನ ವ್ಯವಸ್ಥೆಗಳನ್ನು ಮಾಡಲಾಯಿತು.
ವಾಹನಗಳು ಸುಸ್ಥಿತಿಯಲ್ಲಿವೆ. ಆದರೆ ಕಲಬೆರಕೆ ಡೀಸೆಲ್ ನಿಂದ ಕಾರು ಕೈಕೊಟ್ಟಿವೆ ಎಂದು ಊಹಿಸಿದ್ದೇವೆ. ಆರಂಭದಲ್ಲಿ ಒಂದೆರಡು ವಾಹನಗಳಲ್ಲಿ ಸಮಸ್ಯೆ ಕಂಡು ಬಂದಿತು. ಆದರೆ ಕೆಲವೇ ನಿಮಿಷಗಳ ಅಂತರದಲ್ಲಿ ಎಲ್ಲಾ ವಾಹನಗಳು ಕೆಟ್ಟು ನಿಂತವು ಎಂದು ಬೆಂಗಾವಲು ವಾಹನ ಚಾಲಕ ಶುಭಮ್ ವರ್ಮಾ ಹೇಳಿದ್ದಾರೆ.
“ನಾವು ಸ್ಥಳೀಯ ಪೆಟ್ರೋಲ್ ಪಂಪ್ನಿಂದ 350 ಲೀಟರ್ಗಳಿಗೂ ಹೆಚ್ಚು ಡೀಸೆಲ್ ತುಂಬಿಸಿದ್ದೇವೆ. ಸಿಬ್ಬಂದಿ ಗಮನಿಸಿದಾಗ ಡೀಸೆಲ್ ಕಲಬೆರಕೆಯ ಸಾಧ್ಯತೆ ಕಂಡು ಬರಲಿಲ್ಲ. ಆದರೆ ಸ್ಥಳೀಯ ನಿವಾಸಿಯೊಬ್ಬರು ಅದೇ ಪೆಟ್ರೋಲ್ ಪಂಪ್ನಲ್ಲಿ ಬಾಟಲಿಯಲ್ಲಿ ತುಂಬಿಸಿಕೊಂಡು ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಗಮನಿಸಿದಾಗ ಅದರಲ್ಲಿ ಡೀಸೆಲ್ ಮತ್ತು ನೀರಿನ ಅಂಶಗಳು ಕಂಡು ಬಂದವು ಎಂದು ಅವರು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪೆಟ್ರೋಲ್ ಬಂಕ್ ನಿಂದ ಸರಬರಾಜು ಮಾಡಲಾದ ಡೀಸೆಲ್ ಮಾದರಿಗಳನ್ನು ಸಂಗ್ರಹಿಸಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ಡೀಸೆಲ್ ನಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಲಾಗಿದೆ ಎಂದು ಸ್ಪಷ್ಟವಾದ ನಂತರ ವರದಿ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



