ಬಿರುಗಾಳಿ ಹಾಗೂ ಸಿಡಿಲಿನ ಆರ್ಭಟಕ್ಕೆ ಉತ್ತರ ಪ್ರದೇಶ ತತ್ತರಿಸಿದ್ದು, ಒಂದೇ ದಿನದಲ್ಲಿ 89ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಬುಧವಾರ ರಾತ್ರಿ 8 ಗಂಟೆಯಿಂದ ತಡರಾತ್ರಿ 12 ಗಂಟೆಯವರೆಗೆ ಚಂಡಮಾರುತ ಮಾದರಿ ಬಿರುಗಾಳಿ, ಸಿಡಿಲು ಹಾಗೂ ಮಳೆ ಬಿದ್ದಿದ್ದು, ಇದರಿಂದ ಉತ್ತರ ಪ್ರದೇಶದ ಹಲವು ಜಿಲ್ಲೆಗಳು ತತ್ತರಿಸಿವೆ.
ಬಿರುಗಾಳಿ ಹಾಗೂ ಸಿಡಿಲಿಗೆ ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳು ತತ್ತರಿಸಿದ್ದು, ಪ್ರಯಾಗ್ ರಾಜ್ ಅತೀ ಹೆಚ್ಚು ಹಾನಿಗೆ ಒಳಗಾಗಿದ್ದು, 22 ಮಂದಿ ಅಸುನೀಗಿದ್ದಾರೆ. ಸಂತರವಿದಾಸ್ ನಗರದಲ್ಲಿ 14, ಮಿರ್ಜಾಪುರದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ.
ಉನ್ನಾವೊ, ಬದೌನ್, ಬರೇಲಿ, ಪ್ರತಾಪ್ ಗಢ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೂಡ ಸಾವು-ನೋವು ಸಂಭವಿಸಿದ್ದು, ಭಾರೀ ಮಳೆಗಾಳಿಗೆ ಮರಗಳು ಬಿದ್ದು, ಆಸ್ತಿಪಾಸ್ತಿ ಹಾಗೂ ವಾಹನಗಳಿಗೆ ಹಾನಿಯಾಗಿದೆ.
ಭಾರೀ ಮಳೆ ಗಾಳಿಗೆ 53 ಮಂದಿ ಗಾಯಗೊಂಡಿದ್ದು, 114 ಪ್ರಾಣಿಗಳು ಮೃತಪಟ್ಟಿವೆ. ಬಹುತೇಕ ಸಾವುಗಳು ಭಾರೀ ಮಳೆ ಗಾಳಿಯಿಂದ ಗೋಡೆ ಹಾಗೂ ಮರಗಳು ಬಿದ್ದಿದ್ದರಿಂದ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದ ಪರಿಣಾಮ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಗಾಳಿ ಹಾಗೂ ಸಿಡಿಲಿನ ಆರ್ಭಟ ಆಗಲಿದೆ ಎಂದು ಹಿಂದೆಯೇ ಹವಾಮಾನ ಇಲಾಖೆ ತಜ್ಞರು ಎಚ್ಚರಿಸಿದ್ದರು.



